ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ಪೂರ್ಣಪ್ರಮಾಣದಲ್ಲಿ ರಕ್ಷಣೆ ನೀಡುವುದಾಗಿ ಭರವಸೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಚರ್ಚ್ಗಳ ಮೇಲೆ ದಾಳಿ ಕುರಿತು ನ್ಯಾ.ಸೋಮಶೇಖರ ಆಯೋಗದ ಮಧ್ಯಂತರ ವರದಿಯನ್ನು ಪರಿಶೀಲನೆ ಮಾಡಿ ನಂತರ ಪೂರ್ಣ ಪ್ರಮಾಣದ ವರದಿ ನೋಡಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಮತ್ತು ಕೋಮು ಸೌಹಾರ್ದತೆ ರಕ್ಷಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ ಎಂದು ಹೇಳಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯೋಗ ಪೂರ್ಣ ವರದಿ ನೀಡಿದ ನಂತರ, ಚರ್ಚ್ ದಾಳಿಯಲ್ಲಿ ಯಾರು ಭಾಗವಹಿಸಿದ್ದಾರೆ. ಇದರ ಹಿಂದೆ ಯಾರ ಕೈವಾಡವಿದೆ ಎನ್ನುವುದು ಬಹಿರಂಗಗೊಳ್ಳಲಿದೆ. ಆ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ನುಡಿದರು.
ನ್ಯಾಯಮೂರ್ತಿ ಬಿ.ಕೆ.ಸೋಮಶೇಖರ ಆಯೋಗ ರಾಜ್ಯದ 13ಜಿಲ್ಲೆಗಳಲ್ಲಿ ಚರ್ಚ್ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ, ಬಜರಂಗದಳ, ವಿಶ್ವಹಿಂದೂಪರಿಷತ್ ಮತ್ತು ಶ್ರೀರಾಮಸೇನೆ ಸಂಘಟನೆಗಳ ಪ್ರಮುಖ ಹೊಣೆ ಎಂದು ತಿಳಿಸಿತ್ತು.