2008ರಲ್ಲಿ ರಾಜ್ಯದ ವಿವಿಧೆಡೆ ಚರ್ಚ್ಗಳ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ನ್ಯಾ.ಬಿ.ಕೆ.ಸೋಮಶೇಖರ್ ಆಯೋಗ ಮಧ್ಯಂತರ ವರದಿಯ ಅಂಶವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವುದಕ್ಕೆ ಗೃಹ ಸಚಿವ ವಿ.ಎಸ್.ಆಚಾರ್ಯ ಕಿಡಿಕಾರಿದ್ದಾರೆ.
ತನಿಖಾ ಆಯೋಗದ ಕಾಯ್ದೆ ಪ್ರಕಾರ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸರ್ಕಾರಕ್ಕೆ ನೀಡಬೇಕು. ಸಚಿವ ಸಂಪುಟ ಸಭೆಯಲ್ಲಿ ಅದರ ಬಗ್ಗೆ ಚರ್ಚೆ ನಡೆಸಿ, ವರದಿಯನ್ನು ಸದನದಲ್ಲಿ ಮಂಡಿಸಿದ ನಂತರವೇ ಅದು ಸಾರ್ವಜನಿಕ ಆಸ್ತಿಯಾಗಲಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಸ್ಪಷ್ಟಪಡಿಸಿದರು.
2008ರಲ್ಲಿ ಉಡುಪಿ, ದಕ್ಷಿಣ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ವಿವಿಧೆಡೆ ಚರ್ಚ್ಗಳ ಮೇಲೆ ನಡೆದ ದಾಳಿ ಕುರಿತು ನ್ಯಾ.ಸೋಮಶೇಖರ್ ನೇತೃತ್ವದ ಆಯೋಗ ಇತ್ತೀಚೆಗಷ್ಟೇ ಮಧ್ಯಂತರ ವರದಿಯನ್ನು ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜ್ಯದ ಹೆಚ್ಚುವರಿ ಕಾರ್ಯದರ್ಶಿ ಗುಪ್ತಾ ಅವರಿಗೆ ಸಲ್ಲಿಸಿತ್ತು. ನಂತರ ವರದಿಯಲ್ಲಿನ ಅಂಶಗಳ ಕುರಿತು ನ್ಯಾಯಮೂರ್ತಿಗಳು ಮಾಧ್ಯಮದವರೊಂದಿಗೆ ವಿಷಯ ಹಂಚಿಕೊಂಡಿದ್ದರು.
ಆ ನಿಟ್ಟಿನಲ್ಲಿ ವರದಿ ಬಹಿರಂಗವಾಗಿರುವುದರಿಂದ ವರದಿ ಬಗ್ಗೆ ಹೆಚ್ಚಿಗೆ ಹೇಳಲು ಇಚ್ಚಿಸುವುದಿಲ್ಲ ಎಂದ ಗೃಹಸಚಿವರು, ಆಯೋಗದ ಶಿಫಾರಸುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.