ರಾಜ್ಯದ ವಿವಿಧೆಡೆ ನಡೆದ ಚರ್ಚ್, ಪ್ರಾರ್ಥನಾ ಮಂದಿರದ ದಾಳಿಗೆ ಸಂಘ ಪರಿವಾರದ ಅಂಗಸಂಸ್ಥೆಗಳಾದ ಬಜರಂಗದಳ, ವಿಎಚ್ಪಿ ಕಾರಣ ಎಂದು ನ್ಯಾಯಮೂರ್ತಿ ಬಿ.ಕೆ.ಸೋಮಶೇಖರ್ ಆಯೋಗ ತಿಳಿಸಿದೆ. ಆ ನಿಟ್ಟಿನಲ್ಲಿ ಬಜರಂಗದಳ, ವಿಎಚ್ಪಿ, ಶ್ರೀರಾಮಸೇನೆ ಸಂಘಟನೆಗಳನ್ನು ಶೀಘ್ರವೇ ನಿಷೇಧಿಸಬೇಕೆಂದು ವಿಪಕ್ಷ ನಾಯಕ ಸಿದ್ದಾರಾಮಯ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕ್ರೈಸ್ತ ಧರ್ಮೀಯರ ಚರ್ಚ್ ದಾಳಿಯ ಹಿಂದೆ ಸಂಘಪರಿವಾರದ ಕೈವಾಡ ಇರುವುದಾಗಿ ಕಾಂಗ್ರೆಸ್ ಈ ಮೊದಲೇ ಆರೋಪಿಸಿತ್ತು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೃಹಸಚಿವ ವಿ.ಎಸ್.ಆಚಾರ್ಯ ದಾಳಿಕೋರರಿಗೆ ರಕ್ಷಣೆ ನೀಡುತ್ತಲೇ ಬಂದಿದೆ. ಸಂಘಪರಿವಾರವನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರತಿಪಕ್ಷಗಳ ವಿರುದ್ಧ ಗೂಬೆ ಕೂರಿಸುವ ಯತ್ನ ಮಾಡಿದ್ದರು ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಆಕ್ರೋಶವ್ಯಕ್ತಪಡಿಸಿದರು.
ಆದರೆ ಚರ್ಚ್ ದಾಳಿ ಕುರಿತಂತೆ ಆಯೋಗ ನೀಡಿರುವ ಮಧ್ಯಂತರ ವರದಿಯಲ್ಲಿ ಎಲ್ಲಾ ವಿಷಯವೂ ಬಹಿರಂಗಗೊಂಡಿದೆ. ಸಂಘ ಪರಿವಾರ ಮತ್ತು ಮುಖ್ಯಮಂತ್ರಿಗಳ ಬಣ್ಣ ಬಟಾಬಯಲಾಗಿದೆ ಎಂದು ಹೇಳಿದರು.
ಕೋಮುಸಾಮರಸ್ಯ ಹಾಳುಗೆಡವಿ ರಾಜಕೀಯ ಲಾಭ ಪಡೆಯಲು ಯತ್ನಿಸಿರುವ ಬಿಜೆಪಿ ನಿಜಬಣ್ಣ ಬಹಿರಂಗವಾಗಿದೆ ಎಂದಿರುವ ಸಿದ್ದರಾಮಯ್ಯ, ಕೋಮುವಾದಿ ಸಂಘಟನೆಗಳನ್ನು ನಿಷೇಧಿಸಿ, ಗಲಭೆಗೆ ಕೈಜೋಡಿಸಿದ ಪೊಲೀಸರನ್ನು ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ.