ಯಾವ ಕಾರಣಕ್ಕೂ ಪ್ರಸಕ್ತ ಸಾಲಿನಲ್ಲಿ ವಿದ್ಯುತ್ ಖರೀದಿ ಇಲ್ಲ ಎಂದು ಕೆ.ಎಸ್ ಈಶ್ವರಪ್ಪ ಇಂಧನ ಸಚಿವರಾಗಿದ್ದಾಗ ಮುಖ್ಯಮಂತ್ರಿಗಳು ಘೋಷಿಸಿದ್ದರು. ಇದೀಗ ಅದೇ ಖಾತೆಯ ಹೊಣೆ ತಮ್ಮ ಹೆಗಲೇರಿದ ತಕ್ಷಣ ಸಿಎಂ ತಮ್ಮ ನಿಲುವನ್ನು ಬದಲಿಸಿದ್ದಾರೆ.
ಪರೀಕ್ಷಾ ವೇಳೆಯಲ್ಲಿ ವಿದ್ಯಾರ್ಥಿಗಳು ಕರೆಂಟ್ ಇಲ್ಲದೆ ಕಿರಿ ಕಿರಿ ಅನುಭವಿಸುವುದನ್ನು ತಪ್ಪಿಸಲು ಮತ್ತು ಬೇಸಿಗೆಯನ್ನು ಸಮರ್ಥವಾಗಿ ಎದುರಿಸಲು ಕಳೆದ ರಾತ್ರಿಯಿಂದಲೇ ರಾಜ್ಯ ವಿದ್ಯುತ್ ಖರೀದಿಯಲ್ಲಿ ತೊಡಗಿದೆ.
ಜಿಂದಾಲ್ ಮತ್ತು ಟಾಟಾ ಸಂಸ್ಥೆಗಳಿಂದ ಯೂನಿಟ್ಗೆ 4.50 ರೂ.ದರದಲ್ಲಿ ಅಲ್ಪಾವಧಿ ಟೆಂಡರ್ ಮೂಲಕ 280 ಮೆಗಾವ್ಯಾಟ್ ವಿದ್ಯುತ್ ಖರೀದಿಸಲಾಗುತ್ತಿದೆ. ಇನ್ನೂ 200 ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಶೀಘ್ರ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ.
ರಾಜ್ಯದಲ್ಲಿ ದೈನಂದಿನ ಬೇಡಿಕೆ 150 ದಶಲಕ್ಷ ಯೂನಿಟ್ ಇದ್ದು, 125ರಿಂದ 130 ದಶಲಕ್ಷ ಯೂನಿಟ್ ಪೂರೈಸಲಾಗುತ್ತಿದೆ. ಅದರಲ್ಲಿ 35 ದಶಲಕ್ಷ ಯೂನಿಟ್ ಕೇಂದ್ರದಿಂದ ದೊರೆಯುತ್ತಿದೆ ಎಂದು ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ಧರಂಸಿಂಗ್ ಅವಧಿಯಲ್ಲಿ 961 ಮತ್ತು ಕುಮಾರಸ್ವಾಮಿ ಅವಧಿಯಲ್ಲಿ 373 ಹಾಗೂ ನಮ್ಮ ಅವಧಿಯಲ್ಲಿ 1,252 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.