ನರ್ಸ್ ಜಯಲಕ್ಷ್ಮಿ ಹಾಗೂ ಸಚಿವ ರೇಣುಕಾಚಾರ್ಯ ಅವರ ನಡುವಿನ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಪ್ರಕರಣದ ಕುರಿತು ಬುಧವಾರ ವಿಚಾರಣೆ ನಡೆಸಿದ 8ನೇ ಎಸಿಎಂಎಂ ನ್ಯಾಯಾಲಯ ಜಯಲಕ್ಷ್ಮಿ ಅವರಿಗೆ ಭದ್ರತೆ ಒದಗಿಸಬೇಕೆಂದು ಪೊಲೀಸ್ ಇಲಾಖೆಗೆ ಆದೇಶಿಸಿದೆ.
ನರ್ಸ್ ಜಯಲಕ್ಷ್ಮಿ ಹಾಗೂ ಸಚಿವ ರೇಣುಕಾಚಾರ್ಯ ಪ್ರಕರಣದ ವಿಚಾರಣೆ ಇಂದು ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಸಚಿವ ಹಾಗೂ ಅವರ ಬೆಂಬಲಿಗರು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ದಿನಗಳಿಂದ ವಿಚಾರಣೆ ನಡೆಯುತ್ತಿತ್ತು.
ರೇಣುಕಾಚಾರ್ಯ ಅವರು ಮೂರು ಬಾರಿ ಕೋರ್ಟ್ಗೆ ಹಾಜರಾಗಿರಲಿಲ್ಲ. 4ನೆ ಬಾರಿ ಹಾಜರಾದಾಗ ಜಯಲಕ್ಷ್ಮಿ ಗೈರು ಹಾಜರಾಗಿದ್ದರು. ಆ ನಿಟ್ಟಿನಲ್ಲಿ ವಿಚಾರಣೆಯನ್ನು ಫೆ.3ಕ್ಕೆ ಮುಂದೂಡಲಾಗಿತ್ತು.
ಇಂದಿನ ವಿಚಾರಣೆಯ ಸಂದರ್ಭದಲ್ಲಿ ಜಯಲಕ್ಷ್ಮಿ ಮತ್ತು ರೇಣುಕಾಚಾರ್ಯ ಮುಖಾಮುಖಿಯಾದರು. ವಿಚಾರಣೆ ನಡೆದ ವೇಳೆ ಆರೋಗ್ಯ ಸರಿ ಇಲ್ಲದ ಕಾರಣ ಸಮಯಾವಕಾಶ ನೀಡಬೇಕೆಂದು ಜಯಲಕ್ಷ್ಮಿ ಮ್ಯಾಜಿಸ್ಟ್ರೇಟ್ ಮುಂದೆ ಮನವಿ ಮಾಡಿದರು. ಮನವಿ ಪುರಸ್ಕರಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಫೆ.22ಕ್ಕೆ ಮುಂದೂಡಿದರು.