ಬೆಪ್ಪು ತಕ್ಕಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇವರಿಗೆ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕಿಡಿಕಾರಿದರು.
ಚರ್ಚ್ ಮೇಲೆ ದಾಳಿ ನಡೆಸುವ ಕಿಡಿಗೇಡಿಗಳ ಕೈ ಕತ್ತರಿಸಿ, ತನ್ನ ವಿರುದ್ಧ ಟೀಕಿಸುವವರ ನಾಲಿಗೆ ಕತ್ತರಿಸಿ ಎಂದು ಯಡಿಯೂರಪ್ಪ ಹೇಳುತ್ತಾರೆ. ಇದು ಅಪರಾಧ ಅಲ್ಲವೆ ಎಂದು ಪ್ರಶ್ನಿಸಿದ ಕಾಗೋಡು, ಅವರು ವಿರುದ್ಧ ಕ್ರಮ ಜರುಗಿಸಬೇಕು ಎಂದರು.
ಕೋಮುವಾದಿ ಸಂಘಟನೆಗಳಾದ ವಿಎಚ್ಪಿ, ಬಜರಂಗದಳ ಮತ್ತು ಶ್ರೀರಾಮಸೇನೆಯನ್ನು ಕೂಡಲೇ ನಿಷೇಧಿಸಬೇಕೆಂದು ಒತ್ತಾಯಿಸಿ ಬುಧವಾರ ಕಾಂಗ್ರೆಸ್ ಮುಖಂಡರು ಧರಣಿ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಬಿಜೆಪಿ ರಾಜ್ಯದ ಜನತೆಗೆ ಹಿಂದೆಂದೂ ಕಂಡರಿಯದ ಆಡಳಿತ ನೀಡುತ್ತೇವೆ ಎಂದು ಹೇಳಿಕೊಂಡು ಅಧಿಕಾರದ ಗದ್ದುಗೆ ಏರಿದ್ದರು. ಆದರೆ ಅವರ ಹೊಣೆಗೇಡಿತನ ಈಗ ಬಯಲಾಗುತ್ತಿದೆ. ಕೋಮು ಸಂಘಟನೆಗಳ ಕೈಯಲ್ಲಿರುವ ಈ ಸರ್ಕಾರದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಜನರು ಎಷ್ಟು ಸುರಕ್ಷಿತವಾಗಿರಬಲ್ಲರು ಎಂಬುದು ರಾಜ್ಯದ ಆಡಳಿತವೇ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದರು.