ಜಗ್ಗೇಶ್ ಮತ್ತು ಕೃಷ್ಣ ಭಟ್ ನೇಮಕಕ್ಕೆ ರಾಜ್ಯಪಾಲರ ಅಸ್ತು...
ಬೆಂಗಳೂರು, ಗುರುವಾರ, 4 ಫೆಬ್ರವರಿ 2010( 11:21 IST )
ಪಕ್ಷಾಂತರಿಯಾಗಿ ಪ್ರಜಾತಂತ್ರ ವ್ಯವಸ್ಥೆಗೆ ಕಳಂಕ ತಂದಿದ್ದಾರೆ ಎಂಬ ಕಾರಣಕ್ಕೆ ಮೇಲ್ಮನೆಗೆ ವಿ.ಸೋಮಣ್ಣ ಅವರ ನಾಮನಿರ್ದೇಶನವನ್ನು ರಾಜ್ಯಪಾಲರು ತಿರಸ್ಕರಿಸಿದ್ದು, ಉಳಿದ ಇಬ್ಬರಾದ ಚಲನಚಿತ್ರ ನಟ, ಕೆಎಸ್ಆರ್ಟಿಸಿ ಉಪಾಧ್ಯಕ್ಷ ಜಗ್ಗೇಶ್ ಮತ್ತು ಎಬಿವಿಪಿ ಹಿನ್ನೆಲೆಯ ಪ್ರೊ.ಪಿ.ವಿ.ಕೃಷ್ಣ ಭಟ್ ಅವರನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡಲು ಅಂಕಿತ ಹಾಕಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಗ್ಗೇಶ್, ಪ್ರೊ.ಕೃಷ್ಣ ಭಟ್ ಹಾಗೂ ವಿ.ಸೋಮಣ್ಣ ಅವರ ಹೆಸರುಗಳನ್ನು ಮೇಲ್ಮನೆಗೆ ನಾಮನಿರ್ದೇಶನ ಮಾಡುವಂತೆ ಕೋರಿ ಬುಧವಾರ ಸಂಜೆ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು.
ಈ ಬಗ್ಗೆ ಪರಿಶೀಲನೆ ನಡೆಸಿದ ರಾಜ್ಯಪಾಲ ಭಾರದ್ವಾಜ್ ಅವರು, ಸಂವಿಧಾನದ 171(3), 171(5)ವಿಧಿ ಪ್ರಕಾರ ಜಗ್ಗೇಶ್ ಮತ್ತು ಕೃಷ್ಣ ಭಟ್ ಅವರನ್ನು ನಾಮನಿರ್ದೇಶನ ಮಾಡಿದ್ದೇನೆ. ಆದರೆ, ಸೋಮಣ್ಣ ಅವರನ್ನು ಈ ನಿಯಮದಡಿ ನಾಮನಿರ್ದೇಶನ ಮಾಡಲು ಸಾಧ್ಯ ಇಲ್ಲ ಎಂದು ಸರ್ಕಾರದ ಕೋರಿಕೆಯನ್ನು ತಿರಸ್ಕರಿಸಿದ್ದಾರೆ.
ಈ ಹಿಂದೆಯೂ 2004ರಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರು, ಬಂಡೆಪ್ಪ ಕಾಶೆಂಪುರ(ಈಗ ಜೆಡಿಎಸ್ ಶಾಸಕ) ಅವರ ಹೆಸರನ್ನು ಮೇಲ್ಮನೆಗೆ ಶಿಫಾರಸು ಮಾಡಿದ್ದರು. ಆದರೆ ಆಗಿನ ರಾಜ್ಯಪಾಲ ಟಿ.ಎನ್.ಚತುರ್ವೇದಿ ಅವರು ರಾಜಕಾರಣಿ ಎನ್ನುವ ಕಾರಣಕ್ಕೆ ಅವರ ಹೆಸರನ್ನು ತಿರಸ್ಕರಿಸಿದ್ದರು. ನಂತರ ಅವರ ಬದಲಿಗೆ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರನ್ನು ನಾಮಕರಣ ಮಾಡಲಾಗಿತ್ತು.