ಮುಖ್ಯಮಂತ್ರಿಗಳೇ ಸಂಘಪರಿವಾರದವರ ಕೈ ಕಡಿಯಿರಿ: ಖರ್ಗೆ ತಿರುಗೇಟು
ಬೆಂಗಳೂರು, ಗುರುವಾರ, 4 ಫೆಬ್ರವರಿ 2010( 12:50 IST )
ಮುಖ್ಯಮಂತ್ರಿಗಳೇ ಸಂಘ ಪರಿವಾರದವರ ಕೈ ಕಡಿಯಿರಿ, ನಾಲಿಗೆ ಸೀಳಿ...ಹೀಗೆ ತಿರುಗೇಟು ನೀಡಿದವರು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚರ್ಚ್ ಮೇಲೆ ದಾಳಿ ಮಾಡುವ ಕಿಡಿಗೇಡಿಗಳ ಕೈ ಕಡಿಯಿರಿ ಎಂದು ಹೇಳುವವನು ಯಡಿಯೂರಪ್ಪ ಅಂತ ಅವರೇ ಬಹಿರಂಗವಾಗಿ ಹೇಳಿದ್ದರು. ಆ ನಿಟ್ಟಿನಲ್ಲಿ ಅವರೇ ನೇಮಕ ಮಾಡಿದ್ದ ನ್ಯಾಯಮೂರ್ತಿ ಸೋಮಶೇಖರ್ ಆಯೋಗ ಚರ್ಚ್ ಮೇಲೆ ದಾಳಿ ನಡೆಸಿದವರು ಬಜರಂಗದಳ, ವಿಹಿಂಪ, ಶ್ರೀರಾಮಸೇನೆ ಎಂಬುದನ್ನು ಉಲ್ಲೇಖಿಸಿದೆ.
ಹಾಗಿದ್ದ ಮೇಲೆ ವಿಷಯ ಸ್ಪಷ್ಟವಾಯಿತು. ಚರ್ಚ್, ಪ್ರಾರ್ಥನಾ ಮಂದಿರದ ದಾಳಿಯ ಹಿಂದೆ ಸಂಘ ಪರಿವಾರದ ಕೈವಾಡ ಇದೆ ಎಂದಾಯಿತು. ಈಗ ಮುಖ್ಯಮಂತ್ರಿ ಯಡಿಯೂರಪ್ಪನವರು ಸಂಘ ಪರಿವಾರದವರ ಕೈ ಕಡಿಯಲಿ ಎಂದು ಖರ್ಗೆ ಹೇಳಿದರು.
ಚರ್ಚ್ ದಾಳಿ ಕುರಿತಂತೆ ಆಯೋಗ ನೀಡಿರುವ ಮಧ್ಯಂತರ ವರದಿ ಬಹಿರಂಗವಾಗಬಾರದಿತ್ತು ಎಂದು ಖ್ಯಾತೆ ತೆಗೆಯುವ ಬದಲು ಆಡಳಿತಾರೂಢ ಬಿಜೆಪಿ ಸರ್ಕಾರ, ವರದಿಯ ಶಿಫಾರಸನ್ನು ಆಧರಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.