ಇನ್ನು ಮುಂದೆ ಶಾಲೆಗಳಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲ, ಶಿಕ್ಷಕರು ಕೂಡ ಮೊಬೈಲ್ ಬಳಸುವಂತಿಲ್ಲ. ಈ ಕುರಿತು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ ವಿಶೇಷ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಶಾಲಾ ಅವಧಿಯಲ್ಲಿ ಮುಖ್ಯ ಶಿಕ್ಷಕರನ್ನು ಬಿಟ್ಟು ಉಳಿದ ಇನ್ಯಾವುದೇ ಸಹ ಶಿಕ್ಷಕರು ಮೊಬೈಲ್ ಬಳಸುವಂತಿಲ್ಲ. ಒಂದು ವೇಳೆ ಮೊಬೈಲ್ ಬಳಕೆ ಕುರಿತು ದೂರುಗಳು ಬಂದರೆ ಅಂತಹ ಶಿಕ್ಷಕರ ಮೇಲೆ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಶಿಕ್ಷಕ ಸಮೂಹಕ್ಕೆ ಅವರು ಸೂಚನೆ ನೀಡಿರುವುದಾಗಿ ಹೇಳಿದ್ದಾರೆ.
ನಗರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಈ ವರ್ಷದಿಂದ ಬದಲಾವಣೆಯನ್ನು ತಂದಿದ್ದು, ಜಿಲ್ಲಾ ಮಟ್ಟದಲ್ಲಿ ಮೊದಲ ಮೂರು ರಾಂಕ್ ಗಳಿಸಿದ ಶಾಲೆಗಳಿಗೆ ಇಲಾಖೆ ವತಿಯಿಂದ ಕಂಪ್ಯೂಟರ್ ನೀಡಲಾಗುವುದು. ಇದು 34 ಶೈಕ್ಷಣಿಕ ಜಿಲ್ಲೆಗೂ ಅನ್ವಯಿಸುತ್ತದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಅಲ್ಲದೆ, ಮಕ್ಕಳ ಹಾಜರಾತಿಯಲ್ಲಿ ಗೊಂದಲ ಉಂಟಾಗುತ್ತಿರುವುದು ತಿಳಿದು ಬಂದಿದ್ದು, ಬದಲಾವಣೆ ತರುವ ಕುರಿತು ಚಿಂತನೆ ನಡೆಸಲಾಗಿದೆ. ಇನ್ನು ಮುಂದೆ ಹಾಜರಾತಿಗಳು ಶುದ್ಧ ಕನ್ನಡದಲ್ಲಿ ಇರುವಂತೆ ಮಾಡಲಾಗುತ್ತಿದೆ ಎಂದರು.