'ವಾಟಾಳ್ ನಾಗರಾಜ್ ಇಲ್ಲದ ವಿಧಾನಸಭೆ ಅಬ್ಬೇಪಾರಿಯಾದಂತಾಗಿದೆ. ಮಣ ಬಂಗಾರ ಇದ್ದರೇನು ಅದರಲ್ಲಿ ಒಂದು ವಜ್ರವಿದ್ದರೆ ಹೆಚ್ಚು ಗೌರವ' ಹೀಗೆಂದು ಹೊಗಳಿದವರು ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ.
ಅ.ನಾ.ಕೃ ಅವರ ಕಾಲದಿಂದಲೂ ಕನ್ನಡ ಚಳವಳಿಗೆ ರೂಪುರೇಶೆ ಕೊಟ್ಟವರು ವಾಟಾಳ್. ಬೆಂಗಳೂರಿನಲ್ಲಿ ಕನ್ನಡ ಸಿನಿಮಾಗಳೇ ಪ್ರದರ್ಶನವಾಗದಿದ್ದ ಸಂದರ್ಭದಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸಬೇಕೆಂದು ಪಟ್ಟು ಹಿಡಿದು ಹೋರಾಟ ನಡೆಸಿದವರು ವಾಟಾಳ್ ಎಂದರು.
ಅವರ ಅಭಿಮಾನಿಗಳು ವಾಟಾಳ್ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವಂತೆ ಶಾಸಕರುಗಳ ಮೇಲೆ ಒತ್ತಡ ಹೇರಬೇಕು. ಈ ಸಂಬಂಧ ನಾನು ಕೂಡ ಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.
ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಅವರಿಗೆ ನಗರದಲ್ಲಿ ಗುರುವಾರ ನಡೆದ ಕನ್ನಡ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಮೈಸೂರಿನ ಅಖಿಲ ಭಾರತ ಅಂಬರೀಶ್ ಅಭಿಮಾನಿಗಳ ಸಂಘವು ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರು ವಾಟಾಳ್ ಅವರಿಗೆ ಕನ್ನಡ ಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿದರು.