ಬಿಬಿಎಂಪಿ ಚುನಾವಣೆ ವಿಚಾರದಲ್ಲಿ ರಾಜ್ಯ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯ ಧೋರಣೆಗೆ ಶುಕ್ರವಾರ ಮತ್ತೆ ರಾಜ್ಯ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಚುನಾವಣಾ ವಿವಾದ ಕಳೆದ ಸುಮಾರು ಒಂದು ವಾರದಿಂದ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮಾಧ್ಯಮಗಳಲ್ಲಿ ನಿರಂತರವಾಗಿ ಸುದ್ದಿ ಪ್ರಕಟವಾಗುತ್ತಿದ್ದರೂ ಚುನಾವಣಾ ಆಯೋಗವಾಗಲಿ, ರಾಜ್ಯ ಸರ್ಕಾರವಾಗಲಿ ಅಥವಾ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಲಿ ಯಾವುದೇ ಕ್ರಮಕ್ಕೆ ಮುಂದಾಗದೇ ಮೌನ ವಹಿಸಿರುವುದು ಹೈಕೋರ್ಟ್ ಆಕ್ರೋಶಕ್ಕೆ ಗುರಿಯಾಗಿದೆ.
ಇನ್ನು ಮುಂದೆ ಅಸಡ್ಡೆ ಧೋರಣೆಗೆ ಅವಕಾಶವಿಲ್ಲ ಎಂದ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ಹಾಗೂ ನ್ಯಾ.ಅಬ್ದುಲ್ ನಜೀರ್ ಅವರನ್ನೊಳಗೊಂಡ ವಿಶೇಷ ವಿಭಾಗೀಯ ಪೀಠ ಇಂದು ಸರ್ಕಾರ, ರಾಜ್ಯ ಚುನಾವಣಾ ಆಯೋಗ, ಬಿಬಿಎಂಪಿಗೆ ತುರ್ತು ನೋಟಿಸ್ ಜಾರಿ ಮಾಡಿದೆ. ಅಲ್ಲದೇ, ಮುಂದಿನ ಸೋಮವಾರ ಆಕ್ಷೇಪದೊಂದಿಗೆ ಸಜ್ಜಾಗಿ ಉತ್ತರ ನೀಡುವಂತೆ ಆದೇಶ ನೀಡಿದೆ.
ಇಂದಿನ ಕಲಾಪದಲ್ಲಿ ಅಡ್ವೋಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಅವರ ಗೈರು ಹಾಜರಿ ಕೂಡ ಮತ್ತೊಂದೆಡೆ ಅಸಮಾಧಾನಕ್ಕೆ ಕಾರಣವಾಯಿತು.