ಮೇಲ್ಮನೆಗೆ ಮಾಜಿ ಸಚಿವ ವಿ.ಸೋಮಣ್ಣ ಅವರ ಹೆಸರನ್ನು ನಾಮನಿರ್ದೇಶನ ಮಾಡಲು ತಿರಸ್ಕರಿಸಿರುವ ರಾಜ್ಯಪಾಲ ಭಾರದ್ವಾಜ್ ಅವರ ಧೋರಣೆಯನ್ನು ಖಂಡಿಸಿ ಟೀಕಾಪ್ರಹಾರ ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರ ಪರವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕ್ಷಮೆ ಯಾಚಿಸಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಈಶ್ವರಪ್ಪ ಅವರನ್ನು ಕ್ಷಮೆ ಕೇಳುವಂತೆ ಒತ್ತಾಯಿಸುವುದಿಲ್ಲ. ಕಾರಣ ಅವರ ಸಂಸ್ಕೃತಿ ಏನು ಎಂಬುದು ಅವರ ಮಾತಿನಿಂದಲೇ ತಿಳಿದುಬಂದಿದ್ದು, ರಾಜ್ಯಪಾಲರ ಸ್ಥಾನಕ್ಕೆ ಗೌರವ ಸೂಚಿಸಿ ಮುಖ್ಯಮಂತ್ರಿಗಳು ಕ್ಷಮೆ ಕೇಳಬೇಕೆಂದು ಅವರು ಒತ್ತಾಯಿಸಿದರು.
ಮುಂದಿನ ಬಜೆಟ್ ಅಧಿವೇಶನದಲ್ಲಿ ರಾಜ್ಯಪಾಲರನ್ನು ಆಹ್ವಾನಿಸಿ, ತಮ್ಮ ಸರ್ಕಾರದ ಪರವಾಗಿಯೇ ಭಾಷಣ ಮಂಡಿಸಬೇಕಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಈಗಲೇ ಕ್ಷಮೆ ಕೇಳುವುದು ಒಳಿತು ಎಂದರು.
ರಾಜ್ಯಪಾಲರು ಸರ್ಕಾರದ ಒಂದು ಭಾಗವಾಗಿದ್ದು, ಅವರನ್ನು ಗೌರವಿಸಬೇಕಾಗಿರುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದ ಡಿಕೆಶಿ, ರಾಜ್ಯಪಾಲರನ್ನು ಅವಮಾನಿಸುವುದು ರಾಜ್ಯ ಮುದ್ರೆಗೆ ಅವಮಾನಿಸಿದಂತೆ ಎಂದು ಹೇಳಿದರು.