'ಈಶ್ವರಪ್ಪನವರೇ, ನಾಲಿಗೆ ಮೇಲೆ ಹಿಡಿತವಿರಲಿ. ಬಾಯಿಗೆ ಬಂದಂತೆ ಮಾತನಾಡಬೇಡಿ. ಇದು ಸಭ್ಯರ ಲಕ್ಷಣವಲ್ಲ' ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತಾಶೆ ಭಾವನೆಯಿಂದ ರಾಜ್ಯಪಾಲರ ವಿರುದ್ಧ ಈಶ್ವರಪ್ಪನವರು ಆರೋಪ ಮಾಡುತ್ತಿದ್ದಾರೆ. ಸಂವಿಧಾನದ ಪ್ರಕಾರ ಮಾತನಾಡುವ ಅಧಿಕಾರ ರಾಜ್ಯಪಾಲರಿಗಿದೆ. ಈ ವಿಷಯವನ್ನು ಈಶ್ವರಪ್ಪನವರು ಮೊದಲು ಮನದಟ್ಟುಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ವಿಧಾನಪರಿಷತ್ಗೆ ವಿ.ಸೋಮಣ್ಣ ಅವರ ಹೆಸರನ್ನು ಸಂವಿಧಾನ ಬದ್ಧವಾಗಿಯೇ ಕೈಬಿಟ್ಟಿದ್ದಾರೆ. ಈ ರೀತಿಯ ಅನೇಕ ಸಂದರ್ಭಗಳು ಬಂದು ಹೋಗಿವೆ. ಇದರ ಬಗ್ಗೆ ಈಶ್ವರಪ್ಪನವರಿಗೆ ಸಾಮಾನ್ಯ ಜ್ಞಾನವೂ ಇಲ್ಲದಂತೆ ಕಾಣುತ್ತದೆ ಎಂದ ಅವರು, ರಾಜ್ಯಪಾಲರ ವಿರುದ್ಧದ ಈಶ್ವರಪ್ಪನವರ ಹೇಳಿಕೆಯನ್ನು ಖಂಡಿಸಿದರು.