ಸಿಎಂ, ಈಶ್ವರಪ್ಪ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಬೇಕು: ಉಗ್ರಪ್ಪ
ಬೆಂಗಳೂರು, ಶನಿವಾರ, 6 ಫೆಬ್ರವರಿ 2010( 14:49 IST )
ಚರ್ಚ್, ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಸುವವರ ಕೈ ಕತ್ತರಿಸಿ ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ರಾಜ್ಯಪಾಲರನ್ನು ಅವಹೇಳನ ಮಾಡಿ ಪ್ರಜಾತಂತ್ರಕ್ಕೆ ಅಪಮಾನವೆಸಗಿದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ವಿ.ಎಸ್.ಉಗ್ರಪ್ಪ ರಾಜ್ಯಪಾಲರನ್ನು ಆಗ್ರಹಿಸಿದ್ದಾರೆ.
ಅಸಂವಿಧಾನಿಕ ಪದಗಳನ್ನು ಬಳಸುತ್ತಿರುವ ಬಿಜೆಪಿಯ ನೈಜ ಸ್ವರೂಪ ಈಗ ಬಯಲಾಗಿದೆ. ಇಂತಹ ನಾಯಕರ ವಿರುದ್ಧ ಕಾನೂನು ಕ್ರಮ ಜರುಗಿಸುವ ಮೂಲಕ ರಾಜ್ಯಪಾಲರು ಎಚ್ಚರಿಕೆ ನೀಡುವ ಅಗತ್ಯವಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಸಭ್ಯ ಪದಪ್ರಯೋಗ ಸುಸಂಸ್ಕೃತಿಯ ಲಕ್ಷಣವಲ್ಲ. ಇಂತಹ ಪದಪ್ರಯೋಗ ಮಾಡಿದ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಧರಣಿ ನಡೆಸಬೇಕೆಂದು ಉಗ್ರಪ್ಪ ಕರೆ ನೀಡಿದರು.