ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲೇ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವಂತೆ ರಾಜ್ಯಸಭಾ ಸದಸ್ಯ ರಾಮಾ ಜೋಯಿಸ್ ಆಗ್ರಹಿಸಿದ್ದಾರೆ.
ಗೋ ಹತ್ಯೆ ಮುಕ್ತ ಕರ್ನಾಟಕ ನಿರ್ಮಾಣ ಸಂಘಟನೆಗಳ ಒಕ್ಕೂಟ ಗೋವಂಶ ರಕ್ಷಣಾದಳ ಮತ್ತು ಸರ್ವಧರ್ಮ ಸಂಸತ್ತು ಗಾಂಧಿ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ಬೆಂಬಲಿಸುವಂತೆ ಸಂಬಂಧಿತ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗೋವಿನ ರಕ್ತ ಭೂಮಿ ಮೇಲೆ ಬೀಳುತ್ತಿರುವುದರಿಂದಲೇ ಇಂದು ದೇಶ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಗೋವು ಪೂಜ್ಯನೀಯ ಪ್ರಾಣಿ ಆದ್ದರಿಂದ ಗೋ ಹತ್ಯೆ ನಿಷೇಧ ಕಾನೂನು ದೇಶಾದ್ಯಂತ ಜಾರಿಯಾಗಬೇಕೆಂದು ಒತ್ತಾಯಿಸಿದರು.
ಸಂವಿಧಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕಾಲದಲ್ಲೇ ಗೋ ಹತ್ಯೆ ನಿಷೇಧ ಕುರಿತು ಉಲ್ಲೇಖ ಮಾಡಲಾಗಿತ್ತು. ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈವರೆಗೂ ಅದು ಜಾರಿಯಾಗಲಿಲ್ಲ ಎಂದರು.