ಅಕ್ರಮ ಸಾರಾಯಿ ದಂಧೆಗೆ ಕಡಿವಾಣ ಹಾಕುವಲ್ಲಿ ಅಬಕಾರಿ ಸಚಿವರು ಪೂರ್ಣವಾಗಿ ವಿಫಲರಾಗಿದ್ದು, ಅಬಕಾರಿ ತೆರಿಗೆ ಸಹ ಸೋರಿಕೆಯಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದೂರಿದ್ದಾರೆ.
ಬಡ ಜನರ ಹಿತದೃಷ್ಟಿಯಿಂದ ರಾಜ್ಯದಲ್ಲಿ ಸಾರಾಯಿ ಮಾರಾಟ ಪುನಃ ಜಾರಿಗೆ ತರುವುದು ಸೂಕ್ತ ಎಂದು ಅವರು ಅಭಿಪ್ರಾಯವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಾಯಿ ನಿಷೇಧದಿಂದ ಆಗಿರುವ ದುಷ್ಪರಿಣಾಮದ ಬಗ್ಗೆ ವಿಧಾನಸಭೆಯಲ್ಲಿ ಗಮನ ಸೆಳೆಯಲಾಗಿದೆ ಎಂದರು.
ಕೇವಲ 12ರೂ.ಗೆ ಸಾರಾಯಿ ಕುಡಿಯುತ್ತಿದ್ದ ಬಡವರು, ಕಾರ್ಮಿಕರು ಇಂದು ಹೆಚ್ಚು ಹಣ ಕೊಟ್ಟು ಮದ್ಯ ಕುಡಿಯಬೇಕಾದ ಸ್ಥಿತಿಗೆ ಬಂದಿದ್ದು, ಬಡ ಜನರ ಕೈಗೆಟಕುವ ಬೆಲೆಯಲ್ಲೇ ಮದ್ಯ ದೊರೆಯುವಂತಾಗಬೇಕು. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದು ಹೇಳಿದರು.
ಅಲ್ಲದೇ, ರಾಜ್ಯದ ಹಣಕಾಸು ದುಸ್ಥಿತಿಯಲ್ಲಿರುವ ಬಗ್ಗೆ ಯಾವುದೇ ವೇದಿಕೆ ಮೇಲೆ ಮುಖ್ಯಮಂತ್ರಿಯೊಂದಿಗೆ ಸಾರ್ವಜನಿಕ ಚರ್ಚೆಗೆ ಸಿದ್ಧ, ಸಾರ್ವಜನಿಕ ಚರ್ಚೆಗೆ ಬರುವುದಾದರೆ ಎಲ್ಲವನ್ನೂ ಬಹಿರಂಗಗೊಳಿಸುವೆ ಎಂದು ಸವಾಲು ಹಾಕಿದರು.