ರಾಜ್ಯದಲ್ಲಿ ನಡೆದ ಚರ್ಚ್ ದಾಳಿ ಪ್ರಕರಣವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ರಾಜ್ಯ ಸರ್ಕಾರವನ್ನು ಕೇಂದ್ರ ಸರ್ಕಾರ ವಜಾ ಮಾಡಲಿ ನೋಡೋಣ. ಬಿಜೆಪಿ ಸರ್ಕಾರ ಜನರಿಂದ ಆಯ್ಕೆಯಾಗಿದೆ. ಇಂಥ ಜನಪ್ರಿಯ ಸರ್ಕಾರ ವಜಾ ಮಾಡಲು ಕೇಂದ್ರ ಸರ್ಕಾರಕ್ಕೆ ಸಾಧ್ಯವೇ ಎಂದು ಬಿಜೆಪಿ ಮುಖಂಡ ವೆಂಕಯ್ಯ ನಾಯ್ಡು ಪ್ರಶ್ನಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆಯನ್ನು ಮಾನದಂಡವಾಗಿ ಬಳಸಿ ರಾಜ್ಯ ಸರ್ಕಾರ ವಜಾ ಮಾಡಿದರೆ ಯಾವುದೇ ರಾಜ್ಯ ಸರ್ಕಾರಗಳು ಉಳಿಯುವುದಿಲ್ಲ. ಹಾಗೇನಾದ್ರೂ ಮಾಡಿದ್ರೆ ಮೊದಲು ಕಾಂಗ್ರೆಸ್ ಆಡಳಿತ ಇರುವ ರಾಜ್ಯ ಸರ್ಕಾರಗಳು ಬಲಿಯಾಗುತ್ತವೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯ ಸರ್ಕಾರಗಳನ್ನು ವಜಾ ಮಾಡಿದ ಕೆಟ್ಟ ಇತಿಹಾಸವಿದೆ. ರಾಜ್ಯಪಾಲರು ಇದಕ್ಕೆ ಅವಕಾಶ ಕೊಡಬಾರದು. ರಾಜಭವನವನ್ನು ರಾಜಕೀಯ ಕೇಂದ್ರವನ್ನಾಗಿ ಮಾಡಬಾರದು ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಅಧಿಕಾರ ಇಲ್ಲ ಎಂಬ ಹತಾಶೆ ಮೂಡಿದೆ. ಆ ನಿಟ್ಟಿನಲ್ಲಿ ಎರಡು ಪಕ್ಷಗಳ ಮುಖಂಡರು ಏನಾದರೂ ಮಾಡಿ ಸರ್ಕಾರ ರಚಿಸಲು ಸಂಚು ರೂಪಿಸುತ್ತಿವೆ. ಇದಕ್ಕಾಗಿ ಕಾನೂನು ಸುವ್ಯವಸ್ಥೆ ಭಂಗ ಎನ್ನುವ ಅಸ್ತ್ರ ಬಳಸುತ್ತಿವೆ. ಇದನ್ನು ರಾಜ್ಯಪಾಲರು ಗಮನಿಸಬೇಕು ಎಂದರು.