ರಾಜಧಾನಿಯ ಕೆಲವು ಬಾರುಗಳ ಮೇಲೆ ದಾಳಿ ನಡೆಸುವುದಕ್ಕೂ ಮೊದಲು ಮೈಸೂರಿನಲ್ಲಿ ಹೇಳಿಕೆ ನೀಡಿರುವ ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ, ಕೆಳವರ್ಗದವರಿಗಾಗಿ ಉತ್ತಮ ಗುಣಮಟ್ಟದ ಕಡಿಮೆ ದರದ ಮದ್ಯ ತಯಾರಿಸುವ ಕುರಿತು ಚಿಂತನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಸಚಿವರು, ಹೆಚ್ಚಿನ ದರ ನೀಡಲಾಗದವರಿಗಾಗಿ ಅನುಕೂಲ ಕಲ್ಪಿಸುವ ಉದ್ದೇಶ ಸರಕಾರದ್ದು. ಅದಕ್ಕಾಗಿ ಕಡಿಮೆ ವೆಚ್ಚದಲ್ಲಿ ಸರಕಾರವೇ ಮದ್ಯ ತಯಾರಿಸಿ ಮಾರಾಟ ಮಾಡುವ ಯೋಜನೆಯಿದೆ ಎಂದರು.
ಶೀಘ್ರದಲ್ಲೇ ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸುತ್ತೇನೆ. ಪ್ರಸಕ್ತ ಜನಸಂಖ್ಯೆಗೆ ಅನುಗುಣವಾಗಿ ಮದ್ಯದಂಗಡಿಗಳಿಲ್ಲ. ಇನ್ನೂ 1,500ರಷ್ಟು ಮದ್ಯದ ಅಂಗಡಿಗಳಿಗೆ ಅನುಮತಿ ನೀಡಲು ಅವಕಾಶವಿರುವುದರಿಂದ ಈ ಬಗ್ಗೆ ಯೋಚಿಸಲಾಗುತ್ತದೆ ಎಂದು ತಿಳಿಸಿದರು.
ಬಳಿಕ ಬೆಂಗಳೂರಿಗೆ ತೆರಳಿದ ಅವರು ತಡರಾತ್ರಿ ಬ್ರಿಗೇಡ್ ರಸ್ತೆಯ ಎರಡು ಬಾರುಗಳ ಮೇಲೆ ಅಬಕಾರಿ ಇಲಾಖೆಯ ಅಧಿಕಾರಿಗಳೊಂದಿಗೆ ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಬಾರ್ಗಳಲ್ಲಿದ್ದ ಪಂಜಾಬ್, ಮುಂಬೈಯ ಯುವತಿಯರು ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಬಾರ್ನ ಮಾಲಕರು, ಸಿಬ್ಬಂದಿ ಮತ್ತು ಗ್ರಾಹಕರು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರಿಗೇಡ್ ರಸ್ತೆಯಲ್ಲಿನ ಆಕ್ಸಿಜನ್ ಬಾರ್ & ರೆಸ್ಟಾರೆಂಟ್ ಮತ್ತು ಬ್ರಿಗೇಡ್ ಗಾರ್ಡನ್ಸ್ ಬಾರ್ & ರೆಸ್ಟಾರೆಂಟ್ಗಳ ಮೇಲೆ ದಾಳಿ ನಡೆಸಲಾಗಿದ್ದು, ಇಲ್ಲಿ ಡ್ಯಾನ್ಸ್ ಬಾರ್ ನಡೆಯುತ್ತಿರುವ ಬಗ್ಗೆ ಮಾಹಿತಿಗಳು ಬಂದಿದ್ದವು. ಅಲ್ಲದೆ ಅವಧಿ ಮೀರಿದ ಮದ್ಯ ಮಾರಾಟ ಮಾಡುತ್ತಿರುವುದಾಗಿ ಗ್ರಾಹಕರು ದೂರಿಕೊಂಡಿದ್ದರು. ಹಾಗಾಗಿ ದಾಳಿ ನಡೆಸಲಾಗಿದೆ ಎಂದು ಸಚಿವರು ಬಳಿಕ ತಿಳಿಸಿದ್ದಾರೆ.