ಸಾಗರದ ದಂಡಾವತಿ ನೀರಾವರಿ ಯೋಜನೆಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದು, ಭೂಮಿ ನೀಡಿದ ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದರು.
ಸೋಮವಾರ ನಗರದ ಕೋಟೆ ಮಾರಿಕಾಂಬ ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಿರಂತರ ವಿದ್ಯುತ್ ಪೂರೈಕೆ ಸಾಧ್ಯವಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.
ಈಗಾಗಲೇ 240ಯೂನಿಟ್ ವಿದ್ಯುತ್ ಅನ್ನು ಹೊರರಾಜ್ಯದಿಂದ ಖರೀದಿ ಮಾಡಲಾಗಿದೆ. ರಾಜ್ಯದಲ್ಲಿ ಕೊರತೆ ಇರುವ ವಿದ್ಯುತ್ ಅಭಾವ ನೀಗಿಸಲು ಸುಧಾರಣೆ ಮಾಡಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಲಾಗಿದೆ ವಿನಃ, ನಿರಂತರ ವಿದ್ಯುತ್ ನೀಡುತ್ತೇವೆ ಎಂದು ಹೇಳಿಲ್ಲ ಎಂದರು.
ಈ ಹಿಂದೆ ಇಂಧನ ಖಾತೆ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಕೂಡ ವಿದ್ಯುತ್ ಅಭಾವ ನೀಗಿಸಲು ಸಾಕಷ್ಟು ಶ್ರಮಿಸಿದ್ದರು. ಆ ನಿಟ್ಟಿನಲ್ಲಿಯೇ ವಿದ್ಯುತ್ ಕೊರತೆ ನೀಗಿಸಲು ತಾನು ಕೂಡ ಮುಂದುವರಿಯುತ್ತಿರುವುದಾಗಿ ಇಂಧನ ಖಾತೆಯ ಹೊಣೆ ಹೊತ್ತಿರುವ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.