ಅಡ್ವೋಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತೆ ಅವಾಚ್ಯ ಶಬ್ದ ಬಳಸಿರುವುದನ್ನು ವಿರೋಧಿಸಿ ಕೆಂಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲು ಕರ್ನಾಟಕ ವಕೀಲರ ಪರಿಷತ್ನ ನಿರ್ಧಾರಕ್ಕೆ ಗೌಡರ ಪರವಾದ ವಕೀಲರ ಬಣ ತೀವ್ರವಾಗಿ ವಿರೋಧಿಸಿದೆ.
ಮಾಜಿ ಪ್ರಧಾನಿ ಗೌಡರ ಬೈಗುಳವನ್ನು ವಿರೋಧಿಸುವ ಬಗ್ಗೆ ವಕೀಲರಲ್ಲಿಯೇ ಎರಡು ಬಣಗಳು ಹುಟ್ಟಿಕೊಂಡಂತಾಗಿದೆ. ಗೌಡರ ವಿರುದ್ಧ ಕೆಂಪು ಪಟ್ಟಿ ಧರಿಸಿ ವಕೀಲರ ಬಣವೊಂದು ಪ್ರತಿಭಟನೆ ವ್ಯಕ್ತಪಡಿಸಿದರೆ, ಮತ್ತೊಂದು ಬಣ 'ದೇವೇಗೌಡರ ಹೋರಾಟಕ್ಕೆ ನಮ್ಮ ಬೆಂಬಲ' ಎಂಬ ಫಲಕದೊಂದಿಗೆ ಬೆಂಬಲ ವ್ಯಕ್ತಪಡಿಸಿದಾಗ ಹೈಕೋರ್ಟ್ ಆವರಣದಲ್ಲಿಯೇ ಎರಡೂ ಬಣಗಳ ನಡುವೆ ಮಾತಿನ ಚಕಮಕಿ ನಡೆದ ಘಟನೆ ಸೋಮವಾರ ನಡೆಯಿತು.
ಕೆಂಪು ಪಟ್ಟಿ ಧರಿಸಿ, ಅಡ್ವೋಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಬಗ್ಗೆ ಗೌಡರು ಪದೇ, ಪದೇ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಗೌಡರ ಪರ ಬಣ ಕೆಂಪು ಪಟ್ಟಿ ಧರಿಸಿದ ವಕೀಲರೊಂದಿಗೆ ಮಾತಿನ ಚಕಮಕಿಗೆ ಇಳಿಯಿತು. ಅಲ್ಲದೇ ಗೌಡರ ವಿರುದ್ಧ ಪ್ರತಿಭಟನೆ ನಡೆಸಲು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಕೀಲರ ಪರಿಷತ್ನ ನಿರ್ಧಾರಕ್ಕೆ ವಕೀಲರಲ್ಲಿಯೇ ವಿರೋಧ ವ್ಯಕ್ತವಾದ ಕುತೂಹಲಕಾರಿ ಬೆಳವಣಿಗೆ ನಡೆಯಿತು.