ಸರ್ಕಾರಕ್ಕೆ ವಂಚಿಸಿ ದೇವರ ಹುಂಡಿಗೆ ಹಣ: ರೆಡ್ಡಿ ವಿರುದ್ಧ ಸಿದ್ದು
ಶಿವಮೊಗ್ಗ, ಸೋಮವಾರ, 8 ಫೆಬ್ರವರಿ 2010( 17:21 IST )
NRB
ಸರ್ಕಾರಕ್ಕೆ ಚಳ್ಳೆಹಣ್ಣು ತಿನ್ನಿಸಿ ಕೋಟ್ಯಂತರ ರೂಪಾಯಿ ವಂಚಿಸಿರುವ ವ್ಯಕ್ತಿಗಳು ನಂತರ ಅದನ್ನು ದೇವರ ಹುಂಡಿಗೆ ಹಾಕುವುದರಿಂದ ಏನು ಪ್ರಯೋಜನವಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪರೋಕ್ಷವಾಗಿ ರೆಡ್ಡಿ ಬ್ರದರ್ಸ್ ದಾನಧರ್ಮಗಳ ಬಗ್ಗೆ ಕಿಡಿಕಾರಿದರು.
ಅಕ್ರಮವಾಗಿ ಸಂಪಾದಿಸಿದ ಹಣವನ್ನು ತಿರುಪತಿ ತಿಮ್ಮಪ್ಪನ ಹುಂಡಿಗೆ ಹಾಕುವ ಮೂಲಕ ಪಾವನನಾಗಿದ್ದೇನೆ ಎಂಬುವುದು ಎಷ್ಟು ಸರಿ ಎಂದು ರೆಡ್ಡಿಗಳ ವರ್ತನೆಯನ್ನು ಟೀಕಿಸಿದರು.
ಶಿವಮೊಗ್ಗ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಮಾರಿಕಾಂಬಾ ದೇವಿಯ ವಿಗ್ರಹ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇವರು ಎಂದೂ ಹಣ, ವಜ್ರದ ಕಿರೀಟ, ಚಿನ್ನಾಭರಣ ಕೇಳುವುದಿಲ್ಲ. ಮನುಷ್ಯನಲ್ಲಿ ಶುದ್ಧವಾದ ಮನಸ್ಸಿರಬೇಕು ಅಷ್ಟೇ ಎಂದು ಹೇಳಿದರು.
ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚಿಸಿ ದೇವರಿಗೆ ವಜ್ರದ ಕಿರೀಟ, ಉತ್ಸವ ಮಾಡುವುದರಿಂದ ಏನೂ ಪ್ರಯೋಜನವಿಲ್ಲ ಎಂದು ತಿಳಿಸಿದರು.