ರಾಜ್ಯದಲ್ಲಿ ಬಿಟಿ ಬದನೆ ಬೆಳೆಗೆ ನಿಷೇಧ ಹೇರಲು ರಾಜ್ಯ ಸರ್ಕಾರ ನಿರ್ಧರಿಸಿರುವುದಾಗಿ ತೋಟಗಾರಿಕಾ ಸಚಿವ ಉಮೇಶ್ ಕತ್ತಿ ಸೋಮವಾರ ತಿಳಿಸಿದ್ದಾರೆ.
'ಬಿಟಿ ಬದನೆ ವಾಣಿಜ್ಯ ಬೆಳೆಗೆ ನಾವು ನಿಷೇಧ ಹೇರಿದ್ದೇವೆ. ಆ ನಿಟ್ಟಿನಲ್ಲಿ ಬಿಟಿ ಬದನೆ ಬೆಳೆಯ ಕುರಿತು ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರವನ್ನು ಎದುರು ನೋಡುತ್ತಿರುವುದಾಗಿ' ಈಗಾಗಲೇ ಪತ್ರ ಬರೆಯಲಾಗಿದೆ ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.
ಬಿಟಿ ಬದನೆ ಬೆಳೆ ಕುರಿತಂತೆ ಈಗಾಗಲೇ ದೇಶದ ವಿವಿಧೆಡೆ ರೈತರು, ತಜ್ಞರು, ವೈದ್ಯರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಬಿಟಿ ಬದನೆ ಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಫೆಬ್ರುವರಿ 10ರಂದು ಕೇಂದ್ರ ಸರ್ಕಾರ ಅಂತಿಮ ನಿರ್ಧಾರವನ್ನು ಘೋಷಿಸಲಿದೆ ಎಂದು ಈ ಮೊದಲು ಕೇಂದ್ರ ಪರಿಸರ ಖಾತೆ ಸಚಿವ ಜೈರಾಂ ರಮೇಶ್ ಸ್ಪಷ್ಟಪಡಿಸಿದ್ದರು.
ಬಿಟಿ ಬದನೆ ಬೆಳೆ ಕುರಿತು ಸಾಕಷ್ಟು ವಿರೋಧ ಇದ್ದು, ಆ ಕಾರಣದಿಂದಾಗಿ ಕೇಂದ್ರ ಸರ್ಕಾರ ಈ ಬಗ್ಗೆ ಕೂಲಂಕಷವಾಗಿ ಅಭಿಪ್ರಾಯ ಸಂಗ್ರಹಿಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು.
ಅಲ್ಲದೇ, ಭಾನುವಾರ ಬೆಂಗಳೂರಿಗೆ ಆಗಮಿಸಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಚಾಲಕ ಮೋಹನ್ ಭಾಗ್ವತ್ ಕೂಡ, ಬಿಟಿ ಬದನೆ ಬೆಳೆ ಕುರಿತು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದು ವಿದೇಶಿ ತಳಿಯಾಗಿದ್ದು, ಇದರಿಂದಾಗಿ ದೇಶೀಯ ತಳಿಗಳೆಲ್ಲಾ ನಾಶ ಹೊಂದುತ್ತವೆ. ಬಿಟಿ ಬದನೆ ಬೆಳೆಗೆ ಅವಕಾಶ ಮಾಡಿಕೊಟ್ಟಲ್ಲಿ ರೈತರು, ಜನಸಾಮಾನ್ಯರು ಮತ್ತಷ್ಟು ಸಂಕಷ್ಟಕ್ಕೆ ಈಡಾಗುತ್ತಾರೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.