ಪಕ್ಷಾಂತರಿ ಎಂಬ ಕಾರಣ ನೀಡಿ ವಿಧಾನ ಪರಿಷತ್ಗೆ ವಿ. ಸೋಮಣ್ಣ ಅವರ ಹೆಸರನ್ನು ರಾಜ್ಯಪಾಲರು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಬಿಜೆಪಿ ಮತ್ತೊಮ್ಮೆ ಅವರ ಹೆಸರನ್ನೇ ಕಳುಹಿಸುವ ನಿರ್ಧಾರಕ್ಕೆ ಬರಲಿದೆ ಎಂದು ಮೂಲಗಳು ಹೇಳಿದ್ದು, ರಾಜ್ಯ ಸರಕಾರ ಮತ್ತು ರಾಜ್ಯಪಾಲರ ನಡುವೆ ಅನಿವಾರ್ಯ ಸಂಘರ್ಷ ಸೃಷ್ಟಿಯಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸೋಮಣ್ಣ ಅವರು ಬೇರೆ ಪಕ್ಷದಿಂದ ವಲಸೆ ಬಂದವರು ಮತ್ತು ಸಕ್ರಿಯ ರಾಜಕಾರಣದಲ್ಲಿದ್ದಾರೆ. ಹಾಗಾಗಿ ಅವರನ್ನು ವಿಧಾನಪರಿಷತ್ತಿಗೆ ಅವರನ್ನು ನಾಮಕರಣಗೊಳಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಸರಕಾರದ ಶಿಫಾರಸನ್ನು ತಿರಸ್ಕರಿಸಿದ್ದರು.
NRB
ಈ ಬಗ್ಗೆ ಬಿಜೆಪಿ ತೀವ್ರ ಅಸಮಾಧಾನಗೊಂಡಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಮತ್ತು ರಾಷ್ಟ್ರೀಯ ಉಪಾಧ್ಯಕ್ಷ ವೆಂಕಯ್ಯನಾಯ್ಡುರವರು ರಾಜ್ಯಪಾಲರ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದ್ದರು. ರಾಜಭವನದಲ್ಲಿದ್ದುಕೊಂಡು ರಾಜಕಾರಣ ಮಾಡಬೇಡಿ, ಬಹಿರಂಗವಾಗಿ ಕಣಕ್ಕಿಳಿಯಿರಿ ಎಂದು ಬಿಜೆಪಿ ಮುಖಂಡರು ಸವಾಲೆಸೆದಿದ್ದರು.
ಆದರೆ ಸೋಮಣ್ಣ ಅವರ ಹೆಸರನ್ನೇ ಮತ್ತೊಮ್ಮೆ ಕಳುಹಿಸುವ ನಿರ್ಧಾರಕ್ಕೆ ಬಿಜೆಪಿ ಬಂದಲ್ಲಿ ಅದನ್ನು ನಿಯಮಾವಳಿಗಳ ಪ್ರಕಾರ ರಾಜ್ಯಪಾಲರು ತಿರಸ್ಕರಿಸುವಂತಿಲ್ಲ ಎಂದು ಹೇಳಲಾಗಿದೆ.
ಈ ರೀತಿ ಮರುಪರಿಶೀಲನೆಗೆ ಬಿಜೆಪಿ ಮನಸ್ಸು ಮಾಡಿದಲ್ಲಿ ರಾಜಭವನದೊಂದಿಗೆ ಬಹಿರಂಗ ಸಂಘರ್ಷಕ್ಕೆ ಸರಕಾರ ಇಳಿದಂತಾಗುತ್ತದೆ. ಆದರೆ ಇದ್ಯಾವುದನ್ನೂ ಬಿಜೆಪಿ ಮುಖಂಡರು ಲೆಕ್ಕಿಸುತ್ತಿಲ್ಲ. ಈ ಹಿಂದೆ ಚುನಾವಣೆಯಲ್ಲಿ ಸೋತವನ್ನು, ಪಕ್ಷಾಂತರಿಗಳನ್ನು ರಾಜ್ಯಸಭೆಗೆ ನೇಮಿಸಿ ಸಚಿವ ಹುದ್ದೆ ಕೊಟ್ಟ ಉದಾಹರಣೆಗಳಿಲ್ಲವೇ ಎಂದು ಟೀಕಾಕಾರರನ್ನು ಪ್ರಶ್ನಿಸಿದೆ.
ಸೋಮಣ್ಣ ಹೆಸರನ್ನು ಕಳುಹಿಸುವುದೋ ಅಥವಾ ಬೇರೊಬ್ಬರ ಹೆಸರನ್ನು ಶಿಫಾರಸು ಮಾಡುವುದೋ ಎಂಬ ಬಗ್ಗೆ ಶೀಘ್ರದಲ್ಲೇ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡರು ಈ ಕುರಿತು ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.