ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು ಯತ್ನಿಸುತ್ತಿರುವ ರಾಜ್ಯ ಸರ್ಕಾರದ ಧೋರಣೆ ವಿರುದ್ಧ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡ ನಂತರ, ವಿಳಂಬಕ್ಕೆ ಕಾರಣ ನೀಡಿದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಚುನಾವಣೆ ನಡೆಸಲು ಆರು ತಿಂಗಳ ಕಾಲಾವಕಾಶ ಕೋರಿ ಸೋಮವಾರ ಮಧ್ಯಂತರ ಅರ್ಜಿ ಸಲ್ಲಿಸಿದೆ.
ಬಿಬಿಎಂಪಿ ಚುನಾವಣೆ ಅಧಿಸೂಚನೆ ರದ್ದುಗೊಳಿಸಿದ ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಮಂಜುಳಾ ಚೆಲ್ಲೂರು ಮತ್ತು ನ್ಯಾ.ಅಬ್ದುಲ್ ನಜೀರ್ ಅವರಿದ್ದ ವಿಭಾಗೀಯ ಪೀಠ, ಬಿಬಿಎಂಪಿ ಚುನಾವಣಾ ಮೀಸಲು ಕುರಿತಂತೆ ತೀರ್ಪು ನೀಡಿರುವ ಸುಪ್ರೀಂಕೋರ್ಟ್ ಕಾಲಾವಕಾಶ ಬೇಕಾದರೆ ಹೈಕೋರ್ಟ್ನಲ್ಲಿ ಕೇಳಿ ಪಡೆಯಿರಿ ಎಂದು ಹೇಳಿದರೂ ಇದುವರೆಗೆ ಸರ್ಕಾರ ಚುನಾವಣೆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಕುರಿತು ತರಾಟೆಗೆ ತೆಗೆದುಕೊಂಡಿತು.
ಆ ನಿಟ್ಟಿನಲ್ಲಿ ಹೈಕೋರ್ಟ್ ನಿರ್ದೇಶನದಂತೆ ಚುನಾವಣೆಗೆ ಆರು ತಿಂಗಳು ಕಾಲಾವಕಾಶ ನೀಡುವಂತೆ ಕೋರಿ ಸರ್ಕಾರ ಸೋಮವಾರ ಸಂಜೆ ನ್ಯಾಯಾಲಯಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿದೆ.
ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಪರೀಕ್ಷೆ ಇರುವುದರಿಂದ ಹಾಗೂ ಏಪ್ರಿಲ್ 15ರಿಂದ ಜೂನ್ 1ರವರೆಗೆ ಮನೆ ಗಣತಿ ಮತ್ತು ಜನಸಂಖ್ಯೆ ನೋಂದಣಿ ಕೆಲಸಗಳು ನಡೆಯಲಿವೆ. ಹೀಗಾಗಿ ಈ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಅಸಾಧ್ಯ ಎಂದು ಹೆಚ್ಚುವರಿ ಜನರಲ್ ಅಡ್ವೋಕೇಟ್ ಹೈಕೋರ್ಟ್ಗೆ ವಿವರಣೆ ನೀಡಿದರು.