ಜಿಲ್ಲಾ ಪಂಚಾಯತ್ ಸಭೆಯ ನಡಾವಳಿಯನ್ನು ಮರಾಠಿ ಭಾಷೆಯಲ್ಲೇ ನೀಡಬೇಕೆಂಬ ಮರಾಠಿಗರ ಒತ್ತಾಯಕ್ಕೆ ಯಾವುದೇ ಕಾರಣಕ್ಕೂ ಸರ್ಕಾರ ಸೊಪ್ಪು ಹಾಕೋಲ್ಲ ಎಂದು ಕಾನೂನು ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ಭಾಷೆ ಕನ್ನಡವಾಗಿದ್ದು, ಎಲ್ಲರೂ ಇದಕ್ಕೆ ಬದ್ಧರಾಗಿರಬೇಕು. ಬೆಳಗಾವಿಯವರು ಮರಾಠಿಯಲ್ಲಿ ಕೊಡಿ ಎಂದರೆ, ನಾಳೆ ಕೋಲಾರದವರು ತೆಲುಗಿನಲ್ಲಿ ಕೊಡಿ ಎನ್ನುತ್ತಾರೆ. ಹಾಗೆಯೇ ಮೈಸೂರಿನವರು ಮಲಯಾಳಂನಲ್ಲಿ ಕೊಡಿ ಎನ್ನುತ್ತಾರೆ. ಇದಕ್ಕೆಲ್ಲ ಸೊಪ್ಪು ಹಾಕಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಮರಾಠಿಗರ ಬೇಡಿಕೆಯನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು. ನಿನ್ನೆ ನಗರದಲ್ಲಿ ನಡೆದ ವಕೀಲರ ಪ್ರತಿಭಟನೆಗೆ ಸಂಬಂಧಪಟ್ಟಂತೆ ವಕೀಲ ಸಮುದಾಯದ ಒಗ್ಗಟ್ಟನ್ನು ಒಡೆಯುವ ಕೆಲಸ ಮಾಡಿಲ್ಲ. ಕಾನೂನು ಸಚಿವನಾಗಿ ವಕೀಲ ಸಮುದಾಯದ ಒಗ್ಗಟ್ಟನ್ನು ಕಾಪಾಡುವುದು ನನ್ನ ಜವಾಬ್ದಾರಿಯಾಗಿದ್ದು, ಅದರಂತೆ ಕಾರ್ಯನಿರ್ವಹಿಸಿದ್ದೇನೆ ಎಂದು ಹೇಳಿದರು.