ಕೃಷಿ ಭೂಮಿ ಕಬಳಿಕೆಯ ಲ್ಯಾಂಡ್ ಬ್ಯಾಂಕ್ ಅಗತ್ಯವಿಲ್ಲ: ಗೌಡ ಕಿಡಿ
ಬೆಂಗಳೂರು, ಬುಧವಾರ, 10 ಫೆಬ್ರವರಿ 2010( 19:32 IST )
ಆಡಳಿತರೂಢ ಬಿಜೆಪಿ ಸರ್ಕಾರ ರಾಜ್ಯದಲ್ಲಿ ರೈತರ ಮಾರಣ ಹೋಮ ನಡೆಸಲು ಉದ್ದೇಶಿಸಿದೆ ಎಂದು ಗಂಭೀರವಾಗಿ ಆರೋಪಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ರೈತರ ಬದುಕಿಗೆ ಕೊಳ್ಳಿ ಇಡುವ ಸರ್ಕಾರದ ಲ್ಯಾಂಡ್ ಬ್ಯಾಂಕ್ ಮೂಲಕ ರೈತರ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರೈತ ಪರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಬುಧವಾರ ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತರ ಜಾಗೃತಿಗಾಗಿ ರಾಜ್ಯಾದ್ಯಂತ ಒಂದು ವಾರಗಳ ಕಾಲ ಪ್ರವಾಸ ನಡೆಸುವುದಾಗಿ ಹೇಳಿದರು. ಬಿಜೆಪಿ ಸರ್ಕಾರ ಲ್ಯಾಂಡ್ ಬ್ಯಾಂಕ್ ಮೂಲಕ ರೈತರ ಕೃಷಿ ಭೂಮಿಯನ್ನು ಕಬಳಿಸುತ್ತಿದೆ, ರಾಜ್ಯದಲ್ಲಿ ಸುಮಾರು 1.46ಲಕ್ಷ ಎಕರೆ ಕೃಷಿ ಭೂಮಿ ಸೇರಿದಂತೆ 1.71ಲಕ್ಷ ಎಕರೆ ರೈತರ ಜಮೀನು ವಶಪಡಿಸಿಕೊಂಡಿದ್ದು, ಕೊಡಲೇ ಆ ಜಮೀನನ್ನು ರೈತರಿಗೆ ವಾಪಸ್ ನೀಡಬೇಕೆಂದು ಆಗ್ರಹಿಸಿದ್ದಾರೆ.
ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವ ಸರ್ಕಾರದ ಕ್ರಮದ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜೆಡಿಎಸ್, ಸಿಪಿಐ, ಸಿಪಿಐಎಂ ಹಾಗೂ ದಲಿತ ಸಂಘರ್ಷ ಸಮಿತಿ ಸೇರಿದಂತೆ ಸಮಾನ ಮನಸ್ಕ ಸಂಘಟನೆಗಳ ಜೊತೆಗೂಡಿ ರಾಜ್ಯದ 26ಜಿಲ್ಲೆಗಳಲ್ಲಿ ಫೆ.16ರಿಂದ ಒಂದು ವಾರಗಳ ಕಾಲ ಪ್ರವಾಸ ಕೈಗೊಳ್ಳುವುದಾಗಿ ಹೇಳಿದರು.
ಸರ್ಕಾರ ರೈತರ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದೆ, ಅಲ್ಲದೇ ರೈತರ ಬದುಕಿಗೆ ಮಾರಕವಾಗಲಿರುವ ಲ್ಯಾಂಡ್ ಬ್ಯಾಂಕ್ ಯೋಜನೆಯ ಅಗತ್ಯವಿಲ್ಲ ಎಂದು ಗೌಡರು ಈ ಸಂದರ್ಭದಲ್ಲಿ ಪ್ರತಿಪಾದಿಸಿದರು.
ಬಿಜೆಪಿ ಸರ್ಕಾರ 1.46ಲಕ್ಷ ಎಕರೆ ಕೃಷಿ ಭೂಮಿ ವಶಕ್ಕೆ ಅಧಿಸೂಚನೆ ಹೊರಡಿಸಲು ಮುಂದಾಗಿದ್ದು, ಇದರಲ್ಲಿ ರಾಮನಗರ ಜಿಲ್ಲೆಯೊಂದರಲ್ಲಿಯೇ 12,200ಎಕರೆ ಭೂಮಿ ಸೇರಿದೆ ಎಂದರು. ರಾಮನಗರ ಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ ಪ್ರತಿನಿಧಿಸುವ ಕ್ಷೇತ್ರವಾಗಿದೆ.
ರಾಜ್ಯದ 26ಜಿಲ್ಲೆಗಳಲ್ಲಿ, ಧಾರವಾಡ ಜಿಲ್ಲೆಯ 9,300ಎಕರೆ, ಮೈಸೂರಿನ 5ಸಾವಿರ ಹಾಗೂ ತುಮಕೂರಿನ 4,900ಎಕರೆ ಜಮೀನು ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ.
ಆ ನಿಟ್ಟಿನಲ್ಲಿ ರೈತರಲ್ಲಿ ಜಾಗೃತಿ ಮೂಡಿಸಲು ವಾರಗಳ ಕಾಲ ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ತಿಳಿಸಿದ ಗೌಡರು, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಲ್ಯಾಂಡ್ ಬ್ಯಾಂಕ್ ಸ್ಥಾಪನೆ ಮತ್ತು ಕೃಷಿ ಭೂಮಿ ವಶಪಡಿಕೆಗೆ ಅವಕಾಶ ನೀಡುವುದಿಲ್ಲ. ಈ ಬಗ್ಗೆ ಸಿಂಗೂರ್ ಮಾದರಿಯಂತಹ ಹೋರಾಟ ನಡೆಸಲು ಸಿದ್ಧ ಎಂಬುದಾಗಿಯೂ ಎಚ್ಚರಿಸಿದ್ದಾರೆ.