ಬೃಹತ್ ಬೆಂಗಳೂರು ಮಹಾನಗರಪಾಲಿಕೆ ರಾತ್ರೋರಾತ್ರಿ ಪೂರ್ಣಗೊಳಿಸಿದ್ದ ಸುಮಾರು 3,400ಕೋಟಿ ರೂಪಾಯಿ ಮೌಲ್ಯದ ಟೆಂಡರ್ ಪ್ರಕ್ರಿಯೆಯನ್ನು ಹೈಕೋರ್ಟ್ ಬುಧವಾರ ತಡೆಹಿಡಿದಿದೆ.
ಪಾಲಿಕೆಯ ಈ ಟೆಂಡರ್ ಪ್ರಕ್ರಿಯೆ ಚಟುವಟಿಕೆ ಅಸಂವಿಧಾನಿಕ ಎಂದು ಆರೋಪಿಸಿರುವ ಮಾಜಿ ಮೇಯರ್ ಪಿ.ಆರ್.ರಮೇಶ್ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಟೆಂಡರ್ ಪ್ರಕ್ರಿಯೆಯನ್ನು ತಡೆಹಿಡಿದಿರುವುದಾಗಿ ಸರ್ಕಾರದ ಪರ ವಕೀಲರು ಪೀಠಕ್ಕೆ ತಿಳಿಸಿದ್ದಾರೆ.
ಟೆಂಡರ್ ವಿಚಾರವಾಗಿ ಪಾಲಿಕೆ ಆಯುಕ್ತರು ಪ್ರತಿಕ್ರಿಯೆ ನೀಡಬೇಕಿದ್ದು, ಆದರೆ ಬರುವ ಫೆ.23ರವರೆಗೆ ಆಯುಕ್ತರು ಲಭ್ಯವಿರದ ಕಾರಣ ಟೆಂಡರ್ ಪ್ರಕ್ರಿಯೆಯನ್ನು ಮುಂದುವರಿಸುವುದಿಲ್ಲ ಎಂದು ಪಾಲಿಕೆ ಪರ ವಕೀಲರು ನ್ಯಾ.ಗೋಪಾಲಗೌಡ ಮಚ್ಚು ಎ.ಎಸ್.ಬೋಪಣ್ಣ ಪೀಠದ ಮುಂದೆ ಸ್ಪಷ್ಟಪಡಿಸಿದರು.
ಇದಕ್ಕೆ ಪ್ರತಿವಾದ ಮಂಡಿಸಿದ ಅರ್ಜಿದಾರರ ಪರ ವಕೀಲ ಪುತ್ತಿಗೆ ರಮೇಶ್, ಈ ಕುರಿತು ಸರ್ಕಾರ ದಾಖಲೆಗಳನ್ನು ಹಾಜರುಪಡಿಸಬಹುದಲ್ಲ ಎಂದು ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಅಶೋಕ್ ಹಾರ್ನಳ್ಳಿ, ಟೆಂಡರ್ಗೆ ಸಂಬಂಧಿಸಿದಂತೆ ಯಾವ ಕಡತ ಸರ್ಕಾರದ ಬಳಿ ಇಲ್ಲ ಎಂದು ಹೇಳಿದರು.
ವಾದ-ವಿವಾದ ಆಲಿಸಿದ ಪೀಠ ಟೆಂಡರ್ ಪ್ರಕ್ರಿಯೆ ಮುಂದುವರಿಸುವುದಿಲ್ಲ ಎಂದು ಪಾಲಿಕೆ ಹೇಳಿರುವ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಫೆ.25ಕ್ಕೆ ಮುಂದೂಡಿತು.