ರಾಜ್ಯದ ಕಾರಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಕೈದಿಗಳ ಪೈಕಿ ಉತ್ತಮ ಗುಣನಡತೆ ಹೊಂದಿದ 594ಕೈದಿಗಳ ಬಿಡುಗಡೆ ಪ್ರಕ್ರಿಯೆಗೆ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಗ್ರೀನ್ ಸಿಗ್ನಲ್ ನೀಡಿದೆ.
ಏಳು ವರ್ಷ ಜೈಲು ಶಿಕ್ಷೆ ಅನುಭವಿಸಿದ 539ಪುರುಷ ಕೈದಿಗಳು, ಐದು ವರ್ಷ ಜೈಲು ಶಿಕ್ಷೆ ಪೂರೈಸಿದ 22ಮಹಿಳಾ ಕೈದಿಗಳು, 60ವರ್ಷ ದಾಟಿದ 30ಪುರುಷ ಹಾಗೂ 4ವರ್ಷ ಕಾರಾಗೃಹ ಶಿಕ್ಷೆ ಅನುಭವಿಸಿರುವ 50ವರ್ಷ ದಾಟಿದ 3ಕೈದಿಗಳು ಸೇರಿದಂತೆ ಒಟ್ಟು 594 ಕೈದಿಗಳ ವಿವರವನ್ನೊಳಗೊಂಡ ಪ್ರತ್ಯೇಕ ಕಡತಗಳನ್ನು ರಾಜ್ಯಪಾಲರಿಗೆ ಕಳುಹಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಸಂಪುಟ ಸಭೆಯ ನಂತರ ಗೃಹ ಸಚಿವ ವಿ.ಎಸ್.ಆಚಾರ್ಯ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ರಾಜ್ಯಸರ್ಕಾರ 2006ರಲ್ಲೇ ಉತ್ತಮ ಗುಣ ನಡೆಯುಳ್ಳ ಕೈದಿಗಳ ಬಿಡುಗಡೆ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಆದರೆ, ಏಕಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಕೈದಿಗಳ ಬಿಡುಗಡೆ ಮಾಡುವುದಕ್ಕೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ನ್ಯಾಯಾಲಯ ಕೂಡ ಸರ್ಕಾರದ ಈ ಕ್ರಮವನ್ನು ವಿರೋಧಿಸಿತ್ತು.
ಆನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಮತ್ತೆ ಕೈದಿಗಳ ಬಿಡುಗಡೆ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಎಲ್ಲಾ ಕೈದಿಗಳ ಬಿಡುಗಡೆ ಪ್ರಸ್ತಾವನೆಯನ್ನು ಏಕ ಕಡತದಲ್ಲಿ ಕಳುಹಿಸಿರುವುದಕ್ಕೆ ಆಕ್ಷೇಪಿಸಿ ವೈಯಕ್ತಿಕ ವಿವರ ಹಾಗೂ ದಾಖಲೆಗಳನ್ನೊಳಗೊಂಡ ಪ್ರತ್ಯೇಕ ಕಡತಗಳಲ್ಲಿ ಮಂಡಿಸುವಂತೆ ರಾಜ್ಯಪಾಲರು ಸರ್ಕಾರಕ್ಕೆ ನಿರ್ದೇಶನ ನೀಡಿದ್ದರು.