ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚರ್ಚ್ ಮೇಲಿನ ದಾಳಿನ ಕುರಿತಂತೆ ನ್ಯಾಯಮೂರ್ತಿ ಸೋಮಶೇಖರ ಆಯೋಗ ವರದಿಯಲ್ಲಿ ಹೆಸರಿಸಲಾದ ಬಜರಂಗದಳ, ವಿಎಚ್ಪಿ ಮತ್ತು ಶ್ರೀರಾಮಸೇನೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಕ್ರೈಸ್ತ ಒಕ್ಕೂಟ ಬುಧವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ.
ರಾಜ್ಯದ 14ಜಿಲ್ಲೆಗಳಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಚರ್ಚ್ಗಳ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿರುವುದು ಖಂಡನೀಯ. ಇದರಿಂದಾಗಿ ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ದೂರಿದೆ.
ಚರ್ಚ್ಗಳ ದಾಳಿ ಹಿಂದೆ ಸಂಘಪರಿವಾರದ ಕೈವಾಡ ಇದೆ ಎಂಬುದಾಗಿ ಆಯೋಗ ವರದಿ ನೀಡಿದ್ದರು ಕೂಡ ಕಿಡಿಗೇಡಿಗಳನ್ನು ಬಂಧಿಸದಿರುವುದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಇಂತಹ ವಾತಾವರಣದಲ್ಲಿ ಕ್ರಿಶ್ಚಿಯನ್ ಸಮುದಾಯದವರು ಭಯದಿಂದ ಕಾಲಕಳೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದೆ.
ಅಲ್ಲದೇ, ಸರ್ಕಾರ ಪ್ರಾರ್ಥನಾ ಮಂದಿರ ಸ್ಥಳಗಳಿಗೆ ಸೂಕ್ತ ಭದ್ರತೆ ನೀಡಬೇಕು. ಹಾನಿಯಾಗಿರುವ ಚರ್ಚ್ಗಳ ದುರಸ್ತಿಗೆ ಸರ್ಕಾರವೇ ಆರ್ಥಿಕ ನೆರವು ನೀಡಬೇಕು ಮತ್ತು ಹಿಂದು,ಮುಸ್ಲಿಂ ಮತ್ತು ಕ್ರೈಸ್ತರಲ್ಲಿ ಕೋಮು ಸಾಮರಸ್ಯ ಮೂಡಿಸಲು ಅನುಕೂಲವಾಗುವಂತೆ ಧಾರ್ಮಿಕ ಆಯೋಗ ರಚಿಸಬೇಕೆಂದು ಕ್ರೈಸ್ತ ಸಂಘಟನೆ ಒತ್ತಾಯಿಸಿದೆ.