ಪ್ರಸ್ತುತ ರಾಜಕಾರಣದಲ್ಲಿ ಜಾತಿ ಹಾಗೂ ಹಣಬಲವೇ ಮೌಲ್ಯಗಳಾಗಿ ಪರಿವರ್ತನೆಯಾಗುತ್ತಿವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಕೆಂಗಲ್ ಹನುಮಂತಯ್ಯ ಅವರ 102ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾರ್ವಜನಿಕರ ದೃಷ್ಟಿಯಲ್ಲಿ ಇಂದು ರಾಜಕಾರಣಿಗಳು ಎಂದರೆ ಭ್ರಷ್ಟರು ಎಂಬಂತಾಗಿದೆ. ಇದರಿಂದ ಪ್ರಾಮಾಣಿಕರನ್ನು ಕೂಡ ಜನರು ಶಂಕೆಯಿಂದಲೇ ಕಾಣುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜಕೀಯ ಮತ್ತು ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದರೆ ಸರಿಪಡಿಸುವುದು ಕಷ್ಟ. ಜತೆಗೆ ಅದಕ್ಕಿಂತ ಅಪಾಯಕಾರಿ ಸ್ಥಿತಿ ಮತ್ತೊಂದಿಲ್ಲ. ಹೀಗಾಗಿ, ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕೆಂದು ಅವರು ಕರೆ ನೀಡಿದರು.
ಕೆಂಗಲ್ ಹನುಮಂತಯ್ಯನವರು ಕರ್ನಾಟಕ ಏಕೀಕರಣಗೊಂಡರೆ ಅಧಿಕಾರ ತಮಗೆ ಧಕ್ಕದು ಎಂದು ತಿಳಿದಿದ್ದರೂ, ಅಧಿಕಾರಕ್ಕಿಂತ ನಾಡಿನ ಜನ ಒಂದುಗೂಡಬೇಕೆಂಬ ಉದ್ದೇಶ ಹೊಂದಿದ್ದರು. ಇಂತಹ ಒಳ್ಳೆಯತನವನ್ನು ನಾವು ಬೆಳೆಸಿಕೊಳ್ಳಬೇಕು ಎಂದರು.