ಕನ್ನಡ ಭಾಷೆಯ ದ್ವೇಷಿಯಾಗಿರುವ ಮರಾಠಿ ಏಕೀಕರಣ ಸಮಿತಿ(ಎಂಇಎಸ್)ಯನ್ನು ರಾಜ್ಯ ಸರ್ಕಾರ ಕೂಡಲೇ ನಿಷೇಧಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ಯಲಹಂಕಾ ಉಪನಗರದಿಂದ ಯಲಹಂಕ ಪೊಲೀಸ್ ಠಾಣೆಯವರೆಗೆ ಗುರುವಾರ ಟಿ.ಎ.ನಾರಾಯಣ ಗೌಡ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವೇದಿಕೆಯ ಕಾರ್ಯಕರ್ತರು, ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ನಿಷೇಧಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಕನ್ನಡಿಗರ ವಿರೋಧದ ನಡುವೆಯೂ ಮರಾಠಿ ಸೀಮಾ ಪರಿಷತ್ ಕಾರ್ಯಕ್ರಮ ನಡೆಸಿ ಕನ್ನಡಿಗ ಮತ್ತು ಮರಾಠಿಗರ ನಡುವೆ ವಿಷ ಬೀಜ ಬಿತ್ತಿದ ಏಕೀಕರಣ ಸಮಿತಿಯ ಮುಖಂಡರನ್ನು ಬಂಧಿಸಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಅಲ್ಲದೇ, ಮರಾಠಿ ಸೀಮಾ ಪರಿಷತ್ಗೆ ವಿರೋಧ ವ್ಯಕ್ತಪಡಿಸಿದ ರಕ್ಷಣಾ ವೇದಿಕೆಯ ಮುಖಂಡರನ್ನು ಕೂಡಲೇ ಬಿಡುಗಡೆಗೊಳಿಸಬೇಕು, ಅವರ ಮೇಲೆ ಹೂಡಿರುವ ಮೊಕದ್ದಮೆಗಳನ್ನು ವಾಪಸು ಪಡೆಯಬೇಕೆಂದು ವೇದಿಕೆಯ ಕಾರ್ಯಕರ್ತರು ಆಗ್ರಹಿಸಿದರು.