ಕೇಂದ್ರದ ವಿರುದ್ಧವೇ ಹೋರಾಟ ನಡೆಸುತ್ತೇವೆ: ಗುಡುಗಿದ ಈಶ್ವರಪ್ಪ
ಶಿವಮೊಗ್ಗ, ಶುಕ್ರವಾರ, 12 ಫೆಬ್ರವರಿ 2010( 08:57 IST )
NRB
ರಾಜ್ಯದ ವಿಚಾರ ಬಂದಾಗ ಬಹುತೇಕ ಎಲ್ಲಾ ಯೋಜನೆಗಳಲ್ಲಿ ಕೇಂದ್ರ ಸರಕಾರವು ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ. ಇದನ್ನು ಕಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ಇದರ ವಿರುದ್ಧ ನಾವು ಸಿಡಿದೇಳಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಗುಡುಗಿದ್ದಾರೆ.
ಗುರುವಾರ ಶಿವಮೊಗ್ಗದಲ್ಲಿ ಮಾತನಾಡುತ್ತಿದ್ದ ಅವರು, ಕೇಂದ್ರವು ಹಲವು ಯೋಜನೆಗಳ ವಿಚಾರದಲ್ಲಿ ನಮಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.
ರಾಜ್ಯಕ್ಕೆ ನಿರ್ದಿಷ್ಟ ವಿದ್ಯುತ್ ಪೂರೈಸುವುದು, ಮಹದಾಯಿ ಯೋಜನೆ ಜಾರಿ ಸೇರಿದಂತೆ ಹಲವು ಸೌಲಭ್ಯ-ವಿವಾದಗಳ ಪ್ರಶ್ನೆಗಳೆದ್ದಾಗ ಕೇಂದ್ರ ಸರಕಾರವು ಕರ್ನಾಟಕದ ವಿರುದ್ಧವೇ ವರ್ತಿಸುತ್ತಾ ಬಂದಿದೆ. ಇದನ್ನು ಇನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ. ಕೇಂದ್ರದ ವಿರುದ್ಧವೇ ನಾವು ಸಮರ ಸಾರುತ್ತೇವೆ ಎಂದರು.
ಈ ಕುರಿತು ಇದುವರೆಗೆ ಸಮಾಧಾನದಿಂದಲೇ ಮೇಲಿಂದ ಮೇಲೆ ಮನವಿಗಳನ್ನು ಸಲ್ಲಿಸಲಾಗುತ್ತಿತ್ತು. ಆದರೆ ಆ ಕಡೆಯಿಂದ ಬರುತ್ತಿರುವ ಪ್ರತಿಕ್ರಿಯೆ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿಲ್ಲ. ಹಾಗಾಗಿ ನಮಗೀಗ ಉಳಿದಿರುವುದು ಸಂಘರ್ಷದ ಮಾರ್ಗ ಮಾತ್ರ ಎಂದರು.
ಇತ್ತೀಚೆಗಷ್ಟೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಈಶ್ವರಪ್ಪನವರು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಸತತವಾಗಿ ಹರಿಹಾಯುತ್ತಿದ್ದು, ಇದೀಗ ಕೇಂದ್ರ ಸರಕಾರದ ವಿರುದ್ಧವೂ ಕತ್ತಿ ಮಸೆಯಲಾರಂಭಿಸಿದ್ದಾರೆ.
ಜಿಲ್ಲಾ ಪ್ರವಾಸಗಳನ್ನು ಮಾಡಿ ಅಲ್ಲಿನ ಘಟಕಗಳ ಬಿಜೆಪಿ ಕಾರ್ಯಕರ್ತರನ್ನು ಭೇಟಿ ಮಾಡುವ ಉದ್ದೇಶವನ್ನೂ ಇಟ್ಟುಕೊಂಡಿರುವ ಈಶ್ವರಪ್ಪ, ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಅಲ್ಲದೆ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪನವರು ಇನ್ನೂ ಮೂರು ವರ್ಷಗಳ ಕಾಲ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಲಿದ್ದಾರೆ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.