ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವೈದ್ಯರ ಬ್ಲ್ಯಾಕ್ಮೇಲ್ ತಂತ್ರಕ್ಕೆ ಜಗ್ಗುವುದಿಲ್ಲ: ಶ್ರೀರಾಮುಲು (Sri ramulu | BJP | Yeddyurappa | Doctors strike | Karnataka)
ವೈದ್ಯರ ಬ್ಲ್ಯಾಕ್ಮೇಲ್ ತಂತ್ರಕ್ಕೆ ಜಗ್ಗುವುದಿಲ್ಲ: ಶ್ರೀರಾಮುಲು
ಚಿಕ್ಕಮಗಳೂರು, ಶುಕ್ರವಾರ, 12 ಫೆಬ್ರವರಿ 2010( 11:15 IST )
NRB
ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮತ್ತೆ ಮುಷ್ಕರ ನಡೆಸುವುದಾಗಿ ಬೆದರಿಕೆ ಹಾಕಿರುವ ಸರ್ಕಾರಿ ವೈದ್ಯರ ರಾಜೀನಾಮೆಯನ್ನು ಅಗತ್ಯ ಬಿದ್ದರೆ ಸ್ವೀಕರಿಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.
ವೈದ್ಯರ ಹಲವು ಬೇಡಿಕೆಗಳನ್ನು ಈಡೇರಿಸಲಾಗಿದೆ. ಆದರೂ ಕೂಡ ಉಳಿದ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಾಮೂಹಿಕ ರಾಜೀನಾಮೆ ನೀಡುವ ಹೇಳಿಕೆ ನೀಡುವುದು ಸರಿಯಲ್ಲ. ಇದು, ಬ್ಲ್ಯಾಕ್ ಮೇಲ್ ತಂತ್ರ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದರು.
ವೈದ್ಯರ ಬೇಡಿಕೆ ಈಡೇರಿಕೆಯಿಂದಾಗಿ ಸರ್ಕಾರಕ್ಕೆ ಹೆಚ್ಚುವರಿಯಾಗಿ 68ಕೋಟಿ ರೂಪಾಯಿ ಹೊರೆಯಾಗಿದೆ ಎಂದರು. ಕನಿಷ್ಠ ಆರು ವರ್ಷಗಳ ಕಾಲ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಬೇಕೆಂಬ ಸರ್ಕಾರದ ಆದೇಶವನ್ನು ಹಿಂಪಡೆಯಬೇಕೆಂಬ ವೈದ್ಯರ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದರು.
ವೈದ್ಯರು ಮಾನವೀಯ ದೃಷ್ಟಿಯಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಸೇವೆ ಸಲ್ಲಿಸಬೇಕು, ಅದನ್ನು ಬಿಟ್ಟು ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸುವಂತಹ ದುಸ್ಸಾಹಸಕ್ಕೆ ಮುಂದಾಗಬಾರದೆಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.