ಯಡಿಯೂರಪ್ಪ ರಿಯಲ್ ಎಸ್ಟೇಟ್ ದಂಧೆಗಿಳಿದಿದ್ದಾರೆ: ಸಿದ್ದರಾಮಯ್ಯ
ಧಾರವಾಡ, ಶುಕ್ರವಾರ, 12 ಫೆಬ್ರವರಿ 2010( 11:20 IST )
ಕೈಗಾರಿಕಾಭಿವೃದ್ಧಿಗೆ ಕಾಂಗ್ರೆಸ್ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಭೂ ಬ್ಯಾಂಕ್ ನಿರ್ಮಾಣ ಮಾಡುತ್ತೇವೆಂದು ಹೊರಟ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಿಯಲ್ ಎಸ್ಟೇಟ್ ದಂಧೆಗಿಳಿದಿದ್ದಾರೆ ಎಂದು ಆರೋಪಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ತಮ್ಮ ಭೂಮಿಯನ್ನು ಸ್ವ ಇಚ್ಛೆಯಿಂದ ಮಾರಲು ಮತ್ತು ಬೆಲೆ ನಿಗದಿಪಡಿಸಲು ಅವರಿಗೆ ಬಿಡಬೇಕು. ಬಲವಂತದಿಂದ ರೈತರ ಭೂಮಿಯನ್ನು ಕಸಿದುಕೊಳ್ಳಬಾರದು. ಹಾಗೇನಾದರೂ ಮಾಡಿದ್ದೇ ಆದರೆ ಬಿಜೆಪಿ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಡಲು ತಮ್ಮ ಪಕ್ಷ ಸಿದ್ದವಿದೆ ಎಚ್ಚರಿಕೆ ನೀಡಿದರು.
ಅಲ್ಲದೇ ರಾಜ್ಯ ಸರ್ಕಾರ ರೈತರ ಕೃಷಿ ಭೂಮಿಯನ್ನು ಏಕಾಏಕಿ ವಶಪಡಿಸಿಕೊಳ್ಳುತ್ತಿರುವ ಕುರಿತು ಬರುವ ವಿಧಾನಸಭೆಯ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ರಾಜ್ಯದ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎಂದು ಬೊಗಳೆ ಬಿಡುವ ನಾಟಕೀಯತೆ ಸರ್ಕಾರದ್ದು, ವಾಸ್ತವದಲ್ಲಿ ಆರ್ಥಿಕ ಸ್ಥಿತಿ ಸುಭದ್ರವಾಗಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಅವರು ದೂರಿದರು.