ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಅಧಿಕಾರ ಇಲ್ಲದೆ ಇರುವಾಗಲೇ ರೈತರ ಮೇಲೆ ಮಮತೆ ಉಕ್ಕಿ ಕಣ್ಣೀರು ಬರುತ್ತದೆ ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಲೇವಡಿ ಮಾಡಿದೆ.
ಗೌಡರು ಅಧಿಕಾರದ ದರ್ಪದಲ್ಲಿದ್ದಾಗ ರೈತರಿಗೆ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿರಲಿಲ್ಲ. ಇದೀಗ ಅಧಿಕಾರದ ಕುರ್ಚಿ ಇಲ್ಲದೆ ಇರುವುದರಿಂದ ರೈತರ ಮೇಲೆ ಎಲ್ಲಿಲ್ಲದ ಪ್ರೀತಿ ಬಂದುಬಿಟ್ಟಿದೆ ಎಂದು ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.
ಗೌಡರ ತವರು ನೆಲ ಹಾಸನದಲ್ಲಿಯೇ ರೈತರು ಪಡುತ್ತಿರುವ ಕಷ್ಟ ಅವರ ಅರಿವಿಗೆ ಬಾರದಿರುವುದು ವಿಪರ್ಯಾಸ. ಮೊದಲು ಹಾಸನದ ರೈತರ ಬವಣೆಗಳನ್ನು ನಿವಾರಿಸಲು ಯೋಚಿಸಲಿ ಎಂದು ಅವರು ಈ ಸಂದರ್ಭದಲ್ಲಿ ಸಲಹೆ ನೀಡಿದರು.