ಪ್ರೇಮಿಗಳ ದಿನಾಚರಣೆಗೆ ಅಡ್ಡಿಪಡಿಸುವುದಾಗಿ ಬೆದರಿಕೆಯೊಡ್ಡಿರುವ ಬಲಪಂಥೀಯ ಸಂಘಟನೆಯಾಗಿರುವ ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಅವರನ್ನು ಬಂಧಿಸಬೇಕೆಂದು ಕಾಂಗ್ರೆಸ್ ಶುಕ್ರವಾರ ಆಗ್ರಹಿಸಿದೆ.
ಮುತಾಲಿಕ್ ಅವರ ಹೇಳಿಕೆಯಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆ ತಲೆದೋರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಸುದ್ದಿಗಾರರೊಂದಿಗೆ ಮಾತನಾಡುತ್ತ ಆರೋಪಿಸಿದರು. ಮುನ್ನೆಚ್ಚರಿಕೆಯ ಕ್ರಮವಾಗಿ ಮುತಾಲಿಕ್ ಅವರನ್ನು ಬಂಧಿಸಬೇಕಾಗಿದೆ. ಆದರೆ ಸರ್ಕಾರ ಆ ಕೆಲಸವನ್ನು ಮಾಡುತ್ತಿಲ್ಲ ಎಂದು ದೂರಿದರು.
ಅಲ್ಲದೇ, ಗುರುವಾರ ಖಾಸಗಿ ವಾಹಿನಿಯೊಂದು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದ ವೇಳೆಯಲ್ಲಿ ಪ್ರಮೋದ್ ಮುತಾಲಿಕ್ ಅವರ ಮುಖಕ್ಕೆ ಮಸಿ ಬಳಿದಿರುವ ಘಟನೆ ಹಿಂದೆ ಯುವ ಕಾಂಗ್ರೆಸ್ ಕಾರ್ಯಕರ್ತರು ಶಾಮೀಲಾಗಿದ್ದಾರೆ ಎಂದು ಆರೋಪಿಸಿತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಆದರೆ ಇಂತಹ ಘಟನೆಯನ್ನು ಖಂಡಿಸುವುದಾಗಿ ಹೇಳಿದ ಅವರು, ಯುವ ಕಾಂಗ್ರೆಸಿಗರು ಮಸಿ ಬಳಿಯುವ ಕೃತ್ಯ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರತಿಯೊಬ್ಬರಿಗೂ ವ್ಯಾಲೆಂಟೈನ್ ಡೇ ಆಗಲಿ, ಫಾದರ್ಸ್ ಡೇ ಆಗಲಿ ಎಲ್ಲವನ್ನೂ ಆಚರಿಸುವ ಸ್ವಾತಂತ್ರ್ಯ ಇದೆ ಎಂಬುದಾಗಿ ಸಹಮತ ವ್ಯಕ್ತಪಡಿಸಿದರು. ಶ್ರೀರಾಮಸೇನೆಗೆ ಅದನ್ನು ತಡೆಯುವ ಹಕ್ಕಿಲ್ಲ ಎಂದು ಪ್ರತಿಪಾದಿಸಿದರು.