ಪ್ರೇಮಿಗಳು ಯಾರ ಅಡ್ಡಿ ಆತಂಕಕ್ಕೂ ಹೆದರಬಾರದು, ಆ ನಿಟ್ಟಿನಲ್ಲಿ ಪ್ರೇಮಿಗಳು ಯಾವುದೇ ಭಯವಿಲ್ಲದೆ ಫೆ.14ರಂದು ಪ್ರೇಮಿಗಳು ದಿನ ಆಚರಿಸಬಹುದು. ಅಲ್ಲದೇ ಪ್ರೇಮಿಗಳಿಗೆ ರಕ್ಷಣೆ ನೀಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಅಭಯ ನೀಡಿದ್ದಾರೆ.
ಪೊಲೀಸ್ ಆಯುಕ್ತರ ನಿವಾಸದಲ್ಲಿ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೇಮಿಗಳ ದಿನಾಚರಣೆಗೆ ಹಾಗೂ ಪ್ರೇಮಿಗಳಿಗೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಭಾರತ ಪ್ರಜಾಪ್ರಭುತ್ವ ದೇಶವಾಗಿದ್ದು ಎಲ್ಲಾ ಧರ್ಮಿಯರಿಗೆ ತಮ್ಮ ಧಾರ್ಮಿಕ ಆಚರಣೆಗೆ ಸ್ವಾತಂತ್ರ್ಯ ಮತ್ತು ಅವಕಾಶ ನೀಡಲಾಗಿದೆ. ಇದರಂತೆ ಪ್ರೇಮಿಗಳ ದಿನಾಚರಣೆಗೆ ಅವಕಾಶವಿದ್ದು ಅದನ್ನು ಅಡ್ಡಿಪಡಿಸುವುದಾಗಿ ಸರಿಯಲ್ಲ ಎಂದು ಹೇಳಿದರು.
ಪ್ರೇಮಿಗಳ ದಿನಾಚರಣೆ ಆಚರಿಸುವುದು ಅವರವರ ವಿವೇಚನೆಗೆ ಬಿಟ್ಟ ವಿಷಯ ಎಂದು ಶಂಕರ್ ಬಿದರಿ ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರೇಮಿಗಳ ದಿನಾಚರಣೆಯಂದು ಅಡ್ಡಿ ಪಡಿಸುವುದಾಗಿ ಶ್ರೀರಾಮಸೇನೆ ಈಗಾಗಲೇ ಎಚ್ಚರಿಕೆ ನೀಡಿದೆ. ಅಲ್ಲದೇ, ಫೆ.14ರಂದು ಸೆರೆ ಸಿಗುವ ಪ್ರೇಮಿಗಳಿಗೆ ಸ್ಥಳದಲ್ಲಿಯೇ ಮದುವೆ ಮಾಡಿಸುವುದಾಗಿ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಬಿದರಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.