ಶ್ರೀರಾಮ ಸೇನೆಯ ಕುರಿತು ರಾಜ್ಯ ಸರ್ಕಾರ ದ್ವಂಧ್ವ ನಿಲುವು ಅನುಸರಿಸುವ ಮೂಲಕ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂದು ಸಿಪಿಎಂ ಪಾಲಿಟ್ ಬ್ಯುರೋ ಸದ್ಯಸ್ಯೆ ಬೃಂದಾ ಕ್ಯಾರೆಂಟ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮ ಸೇನೆಯ ಮುಖ್ಯಸ್ಥರಾದ ಪ್ರಮೋದ್ ಮುತಾಲಿಕ್ ಅವರಿಗೆ ಮಸಿ ಬಳಿದವರನ್ನು ಬಂಧಿಸಲಾಗಿದೆ. ಆದರೆ ಅದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳಾ ಹೋರಾಟಗಾರ್ತಿಯನ್ನು ಶ್ರೀರಾಮ ಸೇನಾ ಕಾರ್ಯಕರ್ತರು ನಿಂದಿಸಿದ್ದಾರೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವ ಸರ್ಕಾರ ಶ್ರೀರಾಮ ಸೇನೆಗೆ ಬೆಂಬಲ ನೀಡುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ದೂರಿದರು.
ಮುತಾಲಿಕ್ ಅವರಿಗೆ ಮಸಿ ಬಳಿದಿರುವ ಘಟನೆಯನ್ನು ಖಂಡಿಸುತ್ತೇವೆ. ಆದರೆ ಅವರ ಬೆಂಬಲಿಗರು ತೋರಿಸುವ ಅನಾಗರಿಕ ವರ್ತನೆಯನ್ನು ಸಹಿಸುವುದಿಲ್ಲ. ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅಲ್ಪ ಸಂಖ್ಯಾತರಿಗೆ ಬದುಕಲು ಸಾಧ್ಯವಿಲ್ಲ ಎಂಬ ವಾತಾವರಣ ಮೂಡಿದೆ ಎಂದು ಹೇಳಿದರು.
ಇದೇ ವೇಳೆ ಬೆಲೆ ಏರಿಕೆ ಕುರಿತು ಮಾತನಾಡಿದ ಅವರು, ಬೆಲೆ ಏರಿಕೆ ಬಿಸಿಯಿಂದಾಗಿ ಸಾಮಾನ್ಯ ಜನತೆಗೆ ಬದುಕುವುದು ಕಷ್ಟವಾಗುತ್ತಿದೆ. ಬೆಲೆ ಏರಿಕೆ ನಿಯಂತ್ರಣ, ಉದ್ಯೋಗ ಸೃಷ್ಟಿ, ಭೂಮಿ ಇಲ್ಲದವರಿಗೆ ಭೂಮಿ ಸೇರಿದಂತೆ ಹಲವು ವಿಷಯಗಳ ಕುರಿತು ಎಡಪಕ್ಷಗಳು ಹೋರಾಟ ನಡೆಸಲಿದೆ ಎಂದು ತಿಳಿಸಿದ್ದಾರೆ.