ದಂಡಾವತಿ ಜಲಾಶಯ ಯೋಜನೆ ಬಗ್ಗೆ ಕೆಲವರು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ಇದು ಸರಿಯಲ್ಲ. ಈ ಯೋಜನೆಯಿಂದ ಆ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಹರತಾಳ ಹಾಲಪ್ಪ ಸ್ಪಷ್ಟಪಡಿಸಿದರು.
ಸೊರಬ ತಾಲೂಕಿನ ಮರೂರು ಎಂಬಲ್ಲಿ ಈ ಯೋಜನಾ ಸ್ಥಳವಿದ್ದು, 272 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಉದ್ದೇಶಿಸಲಾಗಿದೆ. ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಗುದ್ದಲಿ ಪೂಜೆ ಕಾರ್ಯಕ್ರಮವೂ ನಡೆದಿದೆ. ಈ ಹಂತದಲ್ಲಿ ವಿರೋಧ ಮಾಡುವುದು ಸರಿಯಲ್ಲ. ಬದಲಿಗೆ ಯೋಜನೆ ಶೀಘ್ರ ಅನುಷ್ಠಾನಕ್ಕೆ ಸಹಕರಿಸಬೇಕು ಎಂದವರು ಮನವಿ ಮಾಡಿಕೊಂಡರು.
ಆಣೆಕಟ್ಟೆಯ ನಿರ್ಮಾಣದಿಂದ 1346ಎಕರೆ ಜಮೀನು ಮುಳುಗಡೆಯಾದರೆ, 17132 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ. ಮುಳುಗಡೆಯಾಗಲಿರುವ ಹಳ್ಳಿಗಳ ಜನರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಯೋಜನೆ ವಿರೋಧಿಸಿ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ಮಾತನಾಡುತ್ತಿರುವುದು ಸರಿಯಲ್ಲ. ಅವರು ಜನರಿಗೆ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು.