ಪುಣೆಯ ಜರ್ಮನ್ ಬೇಕರಿ ಸ್ಫೋಟದಲ್ಲಿ ಭಟ್ಕಳ ಮೂಲದ ವ್ಯಕ್ತಿಯ ಕೈವಾಡ ಇರುವುದಾಗಿ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಉದ್ದಕ್ಕೂ ಪೊಲೀಸರು ತೀವ್ರ ಶೋಧಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಭಟ್ಕಳ, ಮಂಗಳೂರು, ಉಡುಪಿ ಸೇರಿದಂತೆ ವಿವಿಧೆಡೆ ಪರಿಶೀಲನೆ ನಡೆಸಿರುವ ಪೊಲೀಸರ ತಂಡ ಸ್ಫೋಟದ ರೂವಾರಿಗಳು ಬಂದು ತಂಗಿರಬಹುದೇ ಎಂಬ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಕರಾವಳಿಯ ಪ್ರತಿಷ್ಠಿತ ಹೊಟೇಲ್, ಲಾಡ್ಜ್, ಪ್ರವಾಸಿ ತಾಣಗಳಲ್ಲಿ ಪೊಲೀಸರು ತೀವ್ರ ಶೋಧ ಪ್ರಾರಂಭಿಸಿದ್ದಾರೆ.
ರಿಯಾಜ್ ಭಟ್ಕಳ್ ಮತ್ತು ಆತನ ಸಹಚರರು ಕರಾವಳಿಯ ಪ್ರಮುಖ ನಗರಗಳಲ್ಲಿ ಸಂಚರಿಸಿ ಸ್ಫೋಟದ ಬಗ್ಗೆ ಸಂಚು ರೂಪಿಸಿದ್ದ ಕುರಿತು ಈ ಹಿಂದೆ ಪೊಲೀಸರಿಗೆ ಮಹತ್ವದ ಸುಳಿವುಗಳು ಸಿಕ್ಕಿದ್ದವು. ಇದರ ಆಧಾರದ ಮೇಲೆಯೇ ಪುಣೆ ಸ್ಫೋಟದ ಜಾಡು ಹಿಡಿದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.