ಮಾತಾ ಅಮೃತಾನಂದಮಯಿ ಸೇರಿದಂತೆ ರಾಜ್ಯದ ಮಠ-ಮಂದಿರಗಳಿಗೆ ಹಣ ನೀಡಿರುವ ಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಲ್ಮನೆಯಲ್ಲಿ ಗುರುವಾರ ಬಲವಾಗಿ ಸಮರ್ಥಿಸಿಕೊಂಡರು.
ಮಠ ಮಂದಿರಗಳಿಗೆ ಹಣವನ್ನು ಅನಾವಶ್ಯಕವಾಗಿ ನೀಡುತ್ತಿಲ್ಲ, ನಾವು ಅವರಿಗೆ ಸ್ವಲ್ಪ ನೆರವು ನೀಡಿದರೆ ಅವರಿಂದ ಬಡವರಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂಬ ದೃಷ್ಟಿಯಿಂದ ಜಾತಿ, ಮತ ನೋಡದೆ ಎಲ್ಲಾ ವರ್ಗದ ಮಠಗಳಿಗೂ ಹಣ ನೀಡಲಾಗಿದೆ. ಇದರಲ್ಲಿ ಆಕ್ಷೇಪ ವ್ಯಕ್ತಪಡಿಸುವಂತಹದ್ದು ಏನೂ ಇಲ್ಲ ಎಂದರು.
ವಿಧಾನಪರಿಷತ್ನಲ್ಲಿ ಇಂದು ಜೆಡಿಎಸ್ನ ವೈಎಸ್ವಿ ದತ್ತ ಅವರು, ಉತ್ತರ ಕರ್ನಾಟಕ ನೆರೆಯಿಂದ ತತ್ತರಿಸಿ ಹೋಗಿದ್ದರು ಕೂಡ, ಅಲ್ಲಿನ ರೈತರ ಸಾಲ ಮನ್ನಾ ಮಾಡಲು ಆಗಿಲ್ಲ. ಆದರೆ ಹಂಪಿ ಉತ್ಸವಕ್ಕೆ 38ಕೋಟಿ ರೂಪಾಯಿ ವೆಚ್ಚ ಮಾಡುತ್ತೀರಿ, ಅದೇ ರೀತಿ ಮಾತಾ ಅಮೃತಾನಂದ ಮಯಿ ಅವರು ನೂರು ಮನೆ ಕಟ್ಟಿಕೊಟ್ಟಿದ್ದಕ್ಕೆ, 5ಕೋಟಿ ರೂ. ಸರ್ಕಾರದ ಬೊಕ್ಕಸದಿಂದ ಹಣ ನೀಡಿ 15 ಎಕರೆ ಜಮೀನು ನೀಡುತ್ತೀರಿ ಇದ್ಯಾವ ನ್ಯಾಯ ಎಂದು ಬಜೆಟ್ ಮೇಲಿನ ಚರ್ಚೆಯ ವೇಳೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿಗಳು, ಮಾತಾ ಅಮೃತಾನಂದಾಮಯಿ ಅವರು ನಮಗೆ ಹಣ ಕೊಡಿ, ಜಮೀನು ಕೊಡಿ ಅಂತ ಕೇಳಿಲ್ಲ. ಸುಮಾರು 100ಕೋಟಿ ರೂಪಾಯಿ ವೆಚ್ಚದಲ್ಲಿ ಆಸ್ಪತ್ರೆಯೊಂದನ್ನು ಕಟ್ಟುವ ಯೋಜನೆ ಅವರು ಹೊಂದಿದ್ದು, ಅದು ನಮ್ಮ ಬಡ ಜನರಿಗೆ ಅನುಕೂಲ ತರಲಿ ಎಂಬ ನಿಟ್ಟಿನಲ್ಲಿ ಆ ಆಸ್ಪತ್ರೆಯನ್ನು ಬೆಂಗಳೂರಿನಲ್ಲಿಯೇ ಕಟ್ಟುವಂತೆ ಜಮೀನು ನೀಡಲಾಗಿದೆ ಎಂದು ಸಮರ್ಥನೆ ನೀಡಿದರು.
ಮಠ-ಮಾನ್ಯಗಳಿಗೆ 1ಕೋಟಿ ರೂಪಾಯಿ ನೀಡಿದರೆ ನೂರಾರು ಕೋಟಿ ರೂ ಆದಾಯ ಸರ್ಕಾರಕ್ಕೆ ಬರುತ್ತದೆ. ಮಠ ಮಂದಿರಗಳಿಗೆ ಹಣ ನೀಡಿದ್ದು ಅಲ್ಲಿಗೆ ತೆರಳುವ ಭಕ್ತಾದಿಗಳಿಗೆ ಅನುಕೂಲವಾಗಲೆಂದೇ ಹೊರತು ಮತ್ತೇನೂ ಅಲ್ಲ ಎಂದು ಸ್ಪಷ್ಟಪಡಿಸಿದರು.