ಪ್ರಿಯಾಂಕಾ ಎಂಬಾಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿಯನ್ನಾಗಿಸಿ ವಂಚಿಸಿ ಕೈಕೊಟ್ಟು ಇನ್ನೊಬ್ಬಳೊಂದಿಗೆ ವಿವಾಹವಾದ ಪ್ರಕರಣದಲ್ಲಿ ಕಳೆದ ಐದೂವರೆ ತಿಂಗಳಿನಿಂದ ಪೊಲೀಸರ ಅತಿಥಿಯಾಗಿರುವ ಆರೋಪಿ ಆನಂದ್ನ ಜಾಮೀನು ಅರ್ಜಿಯನ್ನು ನಗರದ 6ನೇ ತ್ವರತಿ ಗತಿ ನ್ಯಾಯಾಲಯ ಶುಕ್ರವಾರ ವಜಾಗೊಳಿಸಿದೆ.
ಕಳೆದ ಕೆಲವು ತಿಂಗಳಿನಿಂದ ಜೈಲಿನಲ್ಲಿರುವ ಆನಂದ್ ತನಗೆ ಜಾಮೀನು ನೀಡಬೇಕೆಂದು ಕೋರಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ಜಾಮೀನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಪ್ರೇಯಸಿಗೆ (ಪ್ರಿಯಾಂಕಾ) ತಾಯಿ ಭಾಗ್ಯ, ಮತ್ತೊಬ್ಬಳ ಕೊರಳಿಗೆ ತಾಳಿ ಭಾಗ್ಯ ನೀಡಿದ್ದ ಚಂದ್ರಾಲೇ ಔಟ್ ಸರಸ್ವತಿಪುರಂನ ಗುತ್ತಿಗೆದಾರ ಆನಂದ್ (26) ಪ್ರಕರಣ ರಾಜ್ಯಾದ್ಯಂತ ತೀವ್ರ ವಿವಾದ ಹುಟ್ಟುಹಾಕಿತ್ತು.
ಆನಂದ್ ಪ್ರಿಯಾಂಕಾಳನ್ನು ಗರ್ಭಿಣಿಯನ್ನಾಗಿಸಿ ನಂತರ ಜಯನಗರದ ತಿರುಮಲ ಎಂಬಾಕೆಯೊಂದಿಗೆ ರಾಜಾಜಿನಗರದ ಕೆಇಬಿ ಸಮುದಾಯ ಭವನದಲ್ಲಿ ಮದುವೆಯಾಗುತ್ತಿದ್ದ ಸಂದರ್ಭದಲ್ಲಿಯೇ ಪ್ರೇಯಸಿ ಪ್ರಿಯಾಂಕಾ ತನ್ನ ಅಕ್ಕಂದಿರ ಜೊತೆಗೆ ತೆರಳಿ ವಿಚಾರಿಸುವ ಹೊತ್ತಿಗೆ ಆನಂದ್ ಪರಾರಿಯಾಗಿದ್ದ. ಈ ಸಮಯದಲ್ಲಿ ಮದುವೆ ಮನೆಯಲ್ಲೇ ಹೊಯ್ ಕೈ ನಡೆದಿತ್ತು. ತದ ನಂತರ ಪ್ರಕರಣ ಸಾಕಷ್ಟು ಕುತೂಹಲ, ವಿವಾದ ಹುಟ್ಟುಹಾಕಿತ್ತು. ಮಹಿಳಾ ಸಂಘಟನೆಗಳ ಸಾಥ್ನೊಂದಿಗೆ ಆನಂದ್ ಕೊನೆಗೂ ಜೈಲು ಸೇರುವಂತಾಗಿತ್ತು.