ಸಂಪುಟದಲ್ಲಿ ಅರ್ಧ ಡಜನ್ನಷ್ಟು ಕಳಂಕಿತರು ಹಾಗೂ ಕ್ರಿಮಿನಲ್ ಸಚಿವರನ್ನು ಹೊಂದಿರುವ ರಾಜ್ಯ ಬಿಜೆಪಿ ಸರ್ಕಾರದ ಆಡಳಿತವನ್ನು ಯಾವ ಕಾಲದಲ್ಲಿಯೂ ನೋಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಟೀಕಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಷ್ಟು ಜನ ಕ್ರಿಮಿನಲ್ ಸಚಿವರನ್ನು ಹೊಂದಿ ಯಾರೂ ಕೂಡ ಆಡಳಿತ ನಡೆಸಿಲ್ಲ. ಅಂತವರನ್ನು ಸಮರ್ಥಿಸಿಕೊಳ್ಳುತ್ತಿರುವ ಮುಖ್ಯಮಂತ್ರಿಗಳ ವರ್ತನೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹರಿಹಾಯ್ದಿದ್ದಾರೆ.
ಗುರುತರ ಆರೋಪ ಎದುರಿಸುತ್ತಿರುವ ಹಲವರು ಮಂತ್ರಿ ಮಂಡಲದಲ್ಲಿದ್ದಾರೆ. ಇಂತವರನ್ನು ಸಾತ್ವಿಕ ಎನ್ನುವ ಮಾತು ಹೇಳುವ ಮುಖ್ಯಮಂತ್ರಿಗಳನ್ನು ಎಲ್ಲೂ ನೋಡಿಲ್ಲ. ಅಲ್ಲದೆ, ಆರೋಪ ಸಾಬೀತಾದ ಮೇಲೆ ಬಂಧಿಸಿರಿ ಎನ್ನುವ ಕೆ.ಎಸ್. ಈಶ್ವರಪ್ಪ ಅವರಿಗೆ ಕಾನೂನಿನ ಅರಿವೇ ಇಲ್ಲದಂತೆ ಕಾಣುತ್ತದೆ ಎಂದು ದೂರಿದರು.
ಇದೇ ವೇಳೆ ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ವಿರೋಧಿ ಎಂದು ಆರೋಪಿಸಿದ ಸಿದ್ದರಾಮಯ್ಯ, ಬಹಳ ವರ್ಷಗಳಿಂದ ನಿರುದ್ಯೋಗಿಯಾಗಿದ್ದ ಬಿ.ಜೆ.ಪುಟ್ಟಸ್ವಾಮಿ ಅವರನ್ನು ರಾಜಕೀಯ ಕಾರ್ಯದರ್ಶಿಯನ್ನಾಗಿ ಮಾಡಿ ಹಿಂದುಳಿದ ವರ್ಗಗಳ ವಿರುದ್ಧವೇ ಮಾತನಾಡಲು ಷಡ್ಯಂತ್ರ ರೂಪಿಸಿದ್ದಾರೆ. ಏನೂ ತಿಳಿಯದೆ ಮಾತನಾಡುತ್ತಿರುವ ಪುಟ್ಟಸ್ವಾಮಿ ಮೊದಲು ಕಾನೂನು ಓದಲಿ ಎಂದು ಸಲಹೆ ನೀಡಿದ್ದಾರೆ.