ಕರ್ನಾಟಕ ತಮಿಳುನಾಡು ರಾಜ್ಯಗಳ ನಡುವೆ ಉಂಟಾಗಿರುವ ಹೊಗೇನಕಲ್ ಗಡಿ ಸಮಸ್ಯೆ ಮುಗಿಯುವ ತನಕ ರಾಜ್ಯದಲ್ಲಿ ನಿರಂತರವಾಗಿ ಹೋರಾಟ ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಘೋಷಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಸಿ.ಎಂ. ಮಂಜುನಾಥ ಗೌಡ, ಕರ್ನಾಟಕ ರಾಜ್ಯವನ್ನು ತಮಿಳುನಾಡು ಸರ್ಕಾರ ಹಂತ ಹಂತವಾಗಿ ಕಬಳಿಸುತ್ತಿದ್ದರೂ ರಾಜ್ಯ ಸರ್ಕಾರ ಹಾಗೂ ಕೇಂದ್ರ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಇದನ್ನು ಗಮನಿಸಿದರೆ ಕೇಂದ್ರ ಸರ್ಕಾರವು ತಮಿಳುನಾಡು ಸರ್ಕಾರಕ್ಕೆ ಮಣಿದಂತಿದೆ ಎಂದು ಗಂಭೀರ ಆರೋಪ ಮಾಡಿದರು.
ಈ ನಿಟ್ಟಿನಲ್ಲಿ ಇದನ್ನು ಖಂಡಿಸಿರುವ ಕರವೇ, ಮೇ 25ರಂದು ಹೋರಾಟ ನಡೆಸಲಿದೆ. ಹೋರಾಟಕ್ಕೆ ಚಾಮರಾಜನಗರದಿಂದ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಂದು ನಡೆಯಲಿರುವ ಸ್ವಾಭಿಮಾನಿ ಕನ್ನಡಿಗರ ಸಮಾವೇಶದಲ್ಲಿ ಹಲವಾರು ನಿರ್ಣಯಗಳನ್ನು ಕೈಗೆತ್ತಿಕೊಂಡು, ಕರ್ನಾಟಕದ ಹಿತ ಕಾಪಾಡುವ ದೃಷ್ಟಿಯಿಂದ ಮುಂದಿನ ಹೋರಾಟದ ಕುರಿತು ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.