ಮುಂಬಯಿ- ಕಾರವಾರ ಸೂಪರ್ ಫಾಸ್ಟ್ ರೈಲು ಸಂಚಾರವನ್ನು ಮಂಗಳೂರು ಜಂಕ್ಷನ್ (ಕಂಕನಾಡಿ) ತನಕ ಮಾತ್ರ ಓಡಿಸುವ ರೈಲ್ವೆ ಇಲಾಖೆಯ ನಿರ್ಧಾರಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
2009ರಲ್ಲಿ ಭೋಪಾಲ್ನಲ್ಲಿ ನಡೆದ ರೈಲ್ವೆ ಅಂತರ್ ವಲಯ ಸಭೆಯಲ್ಲಿ ಮುಂಬಯಿ- ಕಾರವಾರ ಸೂಪರ್ ಫಾಸ್ಟ್ ರೈಲು ಸಂಚಾರವನ್ನು ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ತನಕ ವಿಸ್ತರಿಸಬೇಕೆಂದು ನಿರ್ಧರಿಸಲಾಗಿದೆ. ಮಂಗಳೂರಿನಿಂದ ಕಾರವಾರದ ಮೂಲಕ ಮುಂಬಯಿಗೆ ತೆರಳುವ ಈ ರೈಲು ಸಂಚಾರವನ್ನು ಮಂಗಳೂರಿನ ತನಕ ವಿಸ್ತರಿಸುವ ಬೇಡಿಕೆಗೆ ರೈಲ್ವೆ ಸಚಿವರು ಸಮ್ಮತಿ ನೀಡಿ, ಆ.14ರಂದು ವಿಸ್ತರಣಾ ರೈಲು ಯಾನ ಉದ್ಘಾಟಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಅಧಿಕಾರಿಗಳು ವ್ಯತಿರಿಕ್ತ ನಿರ್ಧಾರ ಕೈಗೊಂಡಿರುವುದು ಜನತೆಗೆ ಬಗೆದ ದ್ರೋಹವಾಗಿದೆ ಎಂದರು.
ಈ ರೈಲನ್ನು ಕಂಕನಾಡಿ ತನಕ ಮಾತ್ರ ಓಡಿಸುವ ಇಲಾಖೆ ನಿರ್ಧಾರದ ಕುರಿತಂತೆ ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ಭೇಟಿಯಾಗಿ ಚರ್ಚಿಸಲಾಗುವುದೆಂದು ಸಂಸದರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.