ಉಪ ಚುನಾವಣೆ-ಗುಲ್ಬರ್ಗ ದಕ್ಷಿಣಕ್ಕೆ ರೇವೂರ ಪುತ್ರ ಅಖಾಡಕ್ಕೆ?
ಗುಲ್ಬರ್ಗ, ಸೋಮವಾರ, 16 ಆಗಸ್ಟ್ 2010( 16:32 IST )
ಗುಲ್ಬರ್ಗ ದಕ್ಷಿಣ ಮತ ಕ್ಷೇತ್ರದ ಮರು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಎರಡು ದಿನಗಳೊಳಗೆ ಬಿಜೆಪಿ ಸಂಸದೀಯ ಸಭೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ್ ಸವದಿ ಹೇಳಿದರು.
ನಗರದಲ್ಲಿ ಪತ್ರಕರ್ತರ ಜತೆಗೆ ಮಾತನಾಡಿ, ಅನುಕಂಪ ಆಧಾರದ ಮೇಲೆ ಗೆಲ್ಲಲು ಸಾಧ್ಯವೇ ಅಥವಾ ಇನ್ನಾವುದರ ಆಧಾರ ಮೇಲೆ ಗೆಲ್ಲಲು ಸಾಧ್ಯವೇ ಎಂಬಿತ್ಯಾದಿ ವಿಷಯಗಳನ್ನು ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುವುದು ಎಂದರು.
ಕ್ಷೇತ್ರವನ್ನು ಹಿಂದೆ ಪ್ರತಿನಿಸಿದ್ದ ಶಾಸಕ ದಿ.ಚಂದ್ರಶೇಖರ ಪಾಟೀಲ್ ರೇವೂರ ಪುತ್ರ ಜಿಪಂ ಸದಸ್ಯರಾಗಿರುವ ದತ್ತಾತ್ರೇಯ ಪಾಟೀಲ್ ರೇವೂರ ಪಕ್ಷದ ನಾಯಕರು ಸ್ಪರ್ಧಿಸಲು ಆದೇಶ ನೀಡಿದರೆ ಅವಕಾಶ ನೀಡಲಾಗುವುದು ಎಂದರು.
ಚುನಾವಣೆ ಘೋಷಣೆಯಾಗಿದೆ. ಸಮಯ ಸಹ ಕಡಿಮೆ ಇರುವುದರಿಂದ ಆ ನಿಟ್ಟಿನಲ್ಲಿ ಅಭ್ಯರ್ಥಿಯ ಹೆಸರನ್ನು ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಂಡು ದೆಹಲಿಯಿಂದ ಗ್ರೀನ್ ಸಿಗ್ನಲ್ ಪಡೆದ ನಂತರ ಬಿ ಫಾರಂ ನೀಡಲಾಗುವುದು ಎಂದು ತಿಳಿಸಿದ್ದಾರೆ.