ತಾಲೂಕಿನ ಉರ್ದು ಶಾಲೆಗಳ ಸ್ಥಿತಿ ಶೋಚನೀಯವಾಗಿವೆ ಎಂದು ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಮುಮ್ತಾಜ್ ಅಲಿಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಗಾಂಧಿನಗರ ಉರ್ದು ಮಾಧ್ಯಮಿಕ ಶಾಲೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.. ಕೆಲ ಉರ್ದು ಶಾಲೆಗಳಲ್ಲಿ ಸಾಕಷ್ಟು ಶಿಕ್ಷಕರಿದ್ದರೂ ವಿದ್ಯಾರ್ಥಿಗಳದ್ದೇ ಕೊರತೆ ಇದೆ. ಉರ್ದು ಶಾಲೆಗಳ ಶೈಕ್ಷಣಿಕ ಗುಣಮಟ್ಟವೂ ಕಳಪೆ ಇದೆ. ಅಲ್ಪಸಂಖ್ಯಾತ ಸಮುದಾಯದ ಪೋಷಕರ ನಿರಾಸಕ್ತಿ ಹಾಗೂ ಶಿಕ್ಷಕರ ಬೇಜವಾಬ್ದಾರಿಯಿಂದ ಮಕ್ಕಳು ಶಿಕ್ಷಣದಿಂದ ದೂರ ಸರಿಯುತ್ತಿದ್ದಾರೆ ಎಂದು ದೂರಿದರು.
ಮಕ್ಕಳನ್ನು ಶಾಲೆಗೆ ಕರೆತರದಿದ್ದಲ್ಲಿ ಇಲಾಖೆಯ ಸೌಲಭ್ಯಗಳು ನಿರರ್ಥಕವಾಗಲಿವೆ. ಮಕ್ಕಳ ಗೈರು ಹೀಗೆಯೇ ಮುಂದುವರಿದರೆ ಸರಕಾರ ಒಂದು ದಿನ ಅನಿವಾರ್ಯವಾಗಿ ಉರ್ದು ಶಾಲೆಗಳನ್ನು ಮುಚ್ಚುತ್ತದೆ ಎಂದು ಎಚ್ಚರಿಸಿದರು.
ಪ್ರಾಥಮಿಕ ಶಿಕ್ಷಣದಲ್ಲಿ ಉರ್ದು ಮಾಧ್ಯಮದ ಅವಶ್ಯಕತೆ ಇದೆಯಾದರೂ ಪ್ರೌಢಶಾಲಾ ಮಟ್ಟದಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಸಾಕ್ಷರತೆ ಪ್ರಮಾಣ ಅಧಿಕವಾದರಷ್ಟೇ ಅಲ್ಪಸಂಖ್ಯಾತರ ಏಳಿಗೆ ಸಾಧ್ಯ ಎಂದು ಖಾನ್ ಅಭಿಪ್ರಾಯಪಟ್ಟರು.