ಪೊಲೀಸ್ ಇಲಾಖೆ ಬಲವರ್ಧನೆ ಮತ್ತು ಆಧುನೀಕರಣಕ್ಕೆ ಸರಕಾರ ಆದ್ಯತೆ ನೀಡಿದೆ ಎಂದು ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ ಹೇಳಿದ್ದಾರೆ. ಅವರು ಜಾವಗಲ್ನಲ್ಲಿ ನೂತನ ಪೊಲೀಸ್ ಠಾಣೆ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸಿಎಂ ಯಡಿಯೂರಪ್ಪ ಪೊಲೀಸ್ ಇಲಾಖೆಗೆ 250 ಕೋಟಿ ರೂ. ಹೆಚ್ಚುವರಿ ನೆರವು ನೀಡಿದ್ದಾರೆ. ಹೀಗಾಗಿ ಜನಸಂಖ್ಯೆ ಆಧಾರದಲ್ಲಿ ಆದ್ಯತೆ ಮೇಲೆ ಪೊಲೀಸ್ ಠಾಣೆಗಳನ್ನು ಪ್ರಾರಂಭಿಸಲಾಗುತ್ತಿದೆ. ಈ ವರ್ಷ 25 ಪೊಲೀಸ್ ಠಾಣೆ, ಐದು ಸಂಚಾರಿ ಠಾಣೆ ಸೇರಿ ಒಟ್ಟು 30 ಪೊಲೀಸ್ ಠಾಣೆ ಮಂಜೂರು ಮಾಡಲಾಗಿದ್ದು, ಆ ಪೈಕಿ ಈಗಾಗಲೆ 16 ಹೊಸ ಠಾಣೆ ಆರಂಭಿಸಲಾಗಿದೆ. ಉಳಿದ ಠಾಣೆಗಳ ಪ್ರಾರಂಭಕ್ಕೂ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಮರ್ಥವಾಗಿ ಕೆಲಸ ಮಾಡುತ್ತಿದೆ. ನಕ್ಸಲ್ ಹಾವಳಿಯನ್ನು ಯಶಸ್ವಿಯಾಗಿ ಹತ್ತಿಕ್ಕಲಾಗಿದೆ. ಆಂತರಿಕ ಭದ್ರತೆಗೂ ವಿಶೇಷ ಗಮನ ನೀಡಲಾಗಿದೆ ಎಂದು ತಿಳಿಸಿದರು.
ಈಗಾಗಲೇ 400 ಸಬ್ ಇನ್ಸ್ಪೆಕ್ಟರ್ಗಳನ್ನು ನೇಮಿಸಿಕೊಳ್ಳಲಾಗಿದೆ. 4,012 ಪೊಲೀಸ್ ಪೇದೆ ನೇಮಕ ಪ್ರಕ್ರಿಯೆ ನಡೆದಿದೆ. ಇನ್ನೂ ಎರಡು ಹಂತದಲ್ಲಿ ಮೂರು ಸಾವಿರ ಪೊಲೀಸ್ ಪೇದೆಗಳನ್ನು ನೇಮಿಸಿಕೊಳ್ಳಲಾಗುವುದು ಎಂದರು.