ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸೂಚನೆ ಮೇರೆಗೆ ಸಚಿವ ರಾಮಚಂದ್ರಗೌಡ ರಾಜೀನಾಮೆ ನೀಡಿದ್ದಾರೆಂದು ಸಾರಿಗೆ ಸಚಿವ ಆರ್.ಅಶೋಕ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ರಾಮಚಂದ್ರಗೌಡರ ಮೇಲೆ ಅಪಾದನೆ ಹೊರಿಸಿದ್ದರಿಂದ ರಾಜೀನಾಮೆ ನೀಡಿದ್ದಾರೆ. ತನಿಖೆಯ ನಂತರ ಅಪಾದನೆ ಸುಳ್ಳು ಎಂದು ಸಾಬೀತಾಗಿ ಮತ್ತೆ ಅವರು ಸಚಿವ ಸ್ಥಾನ ಪಡೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಸಂಪುಟ ವಿಸ್ತರಿಸುವುದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರಿಗೆ ಬಿಟ್ಟ ವಿಚಾರ, ಅದರ ಬಗ್ಗೆ ನಾನು ಏನನ್ನೂ ಹೇಳಬಯಸುವುದಿಲ್ಲ. ಆದರೆ ಗುಲ್ಬರ್ಗ ಮತ್ತು ಕಡೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವುದು ಮಾತ್ರ ಖಚಿತ ಎಂದರು.
ಆಹಾರ ಇಲಾಖೆಯಲ್ಲಿ ಸಂಪೂರ್ಣ ಬದಲಾವಣೆ ತರುವ ಪ್ರಯತ್ನ ನಡೆದಿದೆ. ಬಿಪಿಎಲ್ ಕಾರ್ಡ್ ಇಲ್ಲದವರಿಗೆ ಗಣಕ ಯಂತ್ರದ ಮೂಲಕ ಅಕ್ಕಿ ವಿತರಿಸಲಾಗುವುದು. ಇದರಿಂದ ಸುಮಾರು 25 ಲಕ್ಷ ನಕಲಿ ಕಾರ್ಡ್ಗಳನ್ನು ತಡೆಯಲಾಗುವುದು ಎಂದು ಹೇಳಿದರು.
ಕೇಂದ್ರ ಸರಕಾರ ಅಕ್ಕಿಯನ್ನು ರಿಯಾಯಿತಿ ದರದಲ್ಲಿ ನೀಡುತ್ತಿದೆ ಅದು ಕಳಪೆಯೆಂದು ಕಂಡುಬಂದರೆ ಯಾರೂ ಅಕ್ಕಿ ತೆಗೆದುಕೊಳ್ಳಬೇಡಿ ಎಂದು ಸೂಚನೆ ನೀಡಲಾಗುವುದು, ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದರು.