ಹರಪನಹಳ್ಳಿ, ಮಂಗಳವಾರ, 21 ಸೆಪ್ಟೆಂಬರ್ 2010( 15:10 IST )
ಸಚಿವ ಸಂಪುಟ ಪುನಾರಚನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿವೇಚನೆಗೆ ಬಿಟ್ಟದ್ದು ಎಂದು ಕಂದಾಯ ಸಚಿವ ಜಿ.ಕರುಣಾಕರ ರೆಡ್ಡಿ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆ ಹರಪನಹಳ್ಳಿಯಲ್ಲಿ ಜಿಲ್ಲಾ ಜಾನಪದ ಉತ್ಸವ ಉದ್ಘಾಟನೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಚಿವ ಪುನಾರಚನೆ ವಿಚಾರದಲ್ಲಿನ ಭಿನ್ನಾಭಿಪ್ರಾಯದ ಬಗ್ಗೆ ನನಗೇನೂ ಗೊತ್ತಿಲ್ಲ. ಸಚಿವರು, ಶಾಸಕರ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯ ಎಂದರು.
ಪುನಾರಚನೆ ಬಗ್ಗೆ ಚರ್ಚಿಸಲು ಸೇರಿದ್ದ ಕೋರ್ ಕಮಿಟಿ ಸಭೆಯಲ್ಲಿ ಸಂಸದ ಅನಂತಕುಮಾರ್ ಭಾಗವಹಿಸದಿರುವ ಹಿಂದೆ 'ರೆಡ್ಡಿ ಬ್ರದರ್ಸ್' ಪಾತ್ರವೇನೂ ಇಲ್ಲ. ತಾವು ಕೋರ್ ಕಮಿಟಿಯಲ್ಲಿಲ್ಲದ ಕಾರಣ ಹೋಗಿರಲಿಲ್ಲ. ನಾನು ಸಮನ್ವಯ ಸಮಿತಿ ಸದಸ್ಯ. ಆದರೆ, ಖಾತೆ ಬದಲಾವಣೆಗೆ ಸಿಎಂ ಮೇಲೆ ಒತ್ತಡ ತಂದಿಲ್ಲ ಎಂದು ಹೇಳಿದರು.
ರಾಜ್ಯದ ನೆರೆ ಸಂತ್ರಸ್ತರಿಗೆ 'ಆಸರೆ' ಮನೆ ನಿರ್ಮಿಸಿಕೊಡಲು ಖಾಸಗಿ ಸಂಸ್ಥೆ, ದಾನಿಗಳು ಸರಕಾರದ ಜತೆ ಒಡಂಬಡಿಕೆ ಮಾಡಿಕೊಂಡಿದ್ದರು. ಅವರಿಗೆ ನೀಡಿದ ಗಡುವು ಮುಗಿದರೂ ಕೆಲವು ದಾನಿಗಳು ಕಾಮಗಾರಿ ಆರಂಭಿಸಿಲ್ಲ. ಹೀಗಾಗಿ ಸರಕಾರವೇ ಕಾಮಗಾರಿ ನಡೆಸಲು ನಿರ್ಧಾರ ಕೈಗೊಂಡಿದೆ ಎಂದರು.
ನಿರ್ಮಿತಿ ಕೇಂದ್ರ, ಭೂ ಸೇನಾ ನಿಗಮ, ಗೃಹ ನಿರ್ಮಾಣ ಮಂಡಳಿ, ಜಿಲ್ಲಾ ಪಂಚಾಯಿತಿಗಳ ಮೂಲಕ ಆಸರೆ ನಿರ್ಮಿಸಲಾಗುತ್ತಿದೆ. ಒಂದೆರಡು ಜಿಲ್ಲೆಗಳಲ್ಲಿ ಜಮೀನು ವಿವಾದ ನ್ಯಾಯಾಲಯದಲ್ಲಿರುವ ಕಾರಣಕ್ಕಾಗಿ ಕಾಮಗಾರಿ ಪ್ರಾರಂಭಗೊಂಡಿಲ್ಲ ಎಂದು ಕರುಣಾಕರ ರೆಡ್ಡಿ ಸ್ಪಷ್ಟಪಡಿಸಿದರು.